ನನ್ನ ಗಂಡನನ್ನು ಬೆತ್ತಲೆಗೊಳಿಸಿ ನಾಗಿಣಿ ಡಾನ್ಸ್ ಮಾಡಿಸಿದ್ರು. ಆ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪತ್ನಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಹೀನ ಕೃತ್ಯವೊಂದು ನಡೆದಿದೆ. ಜ್ಯೋತಿಷಿ ಮತ್ತು ಆತನ ಸ್ನೇಹಿತನೊಬ್ಬ ಕ್ಯಾಬ್ ಚಾಲಕರೊಬ್ಬರನ್ನ ಅಪಹರಣ ಮಾಡಿ ಬೆತ್ತಲೆಯಾಗಿಸಿ ನಾಗಿಣಿ ನೃತ್ಯ ಮಾಡಿಸಿದ್ದಾರೆ. ಅಲ್ಲದೆ ಆ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆಹಿಡಿದು ಅಮಾನವೀಯವಾಗಿ ವರ್ತಿಸಿದ್ದಾರೆ.
ಕೆ.ಆರ್.ಪುರದ ಸತೀಶ್ ಎಂಬಾತ ದೌರ್ಜನ್ಯಕ್ಕೆ ಒಳಗಾದ ಕ್ಯಾಬ್ ಚಾಲಕ. ಈತನ ಪತ್ನಿ ಕೊಟ್ಟ ದೂರಿನ ಮೇರೆಗೆ ಆರೋಪಿ ದಯಾಳ್ ಮಂಜ ಅಲಿಯಾಸ್ ಪುಲಿ ಮಂಜ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜ್ಯೋತಿಷ್ಯ ಹೇಳುತ್ತಿದ್ದ ದಯಾಳ್ ಮಂಜ, ದೇಶ, ವಿದೇಶಕ್ಕೂ ಹೋಗಿ ಬರುತ್ತಿದ್ದ. ಇದರ ನಡುವೆ ಪರಿಚಿತ ಸತೀಶ್ಗೆ 2 ಲಕ್ಷ ರೂ. ನೀಡಿದ್ದ. ಇದನ್ನು ವಾಪಸ್ ಕೊಟ್ಟಿರಲಿಲ್ಲ. ಕುಪಿತಗೊಂಡ ದಯಾಳ್ ಮಂಜ, ಏನಾದರೂ ಮಾಡಿ ಸತೀಶ್ಗೆ ಬುದ್ಧಿ ಕಲಿಸಬೇಕೆಂದು ಸಂಚು ರೂಪಿಸಿದ್ದ. ಪರಿಚಿತ ಗಣೇಶ್ ಎಂಬಾತನಿಗೆ ಸತೀಶ್ನನ್ನು ಕರೆತರುವಂತೆ ಸೂಚಿಸಿದ್ದ. ಅದರಂತೆ ಗಣೇಶ್ ನ.10ರಂದು ಸತೀಶ್ನನ್ನು ಪುಸಲಾಯಿಸಿ ಮುಳಬಾಗಿಲು ಬಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ದಯಾಳ್ ಮಂಜ ಮತ್ತು ಆತನ ಸಹಚರರು ಸೇರಿಕೊಂಡು ಸತೀಶ್ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ನಾಗಿಣಿ ನೃತ್ಯ ಮಾಡಿಸಿದ್ದಾರೆ.
ಸತೀಶ್ನನ್ನು ಬೆತ್ತಲೆ ಮಾಡಿ ನಾಗಿಣಿ ಡಾನ್ಸ್ ಮಾಡಿಸಿದ್ದು, ಈ ದೃಶ್ಯವನ್ನು ಆರೋಪಿಗಳು ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಬಳಿಕ ಸತೀಶ್ನನ್ನು ಬಿಟ್ಟು ಕಳುಹಿಸಿದ್ದರು. ಇತ್ತ ಆರೋಪಿ ದಯಾಳ್ ಮಂಜ, ತಮ್ಮ ಜನಾಂಗದ ಎಂ. ರಾಮಾಪುರ ಗ್ರಾಮ ಸೇವಕರ ಸಂಘ ಮತ್ತು ಬುಡ್ಗ ಜಂಗಮ ವಾಟ್ಸ್ಆಯಪ್ ಗ್ರೂಪ್ಗೆ ಆ ವಿಡಿಯೋವನ್ನು ಶೇರ್ ಮಾಡಿದ್ದ. ಮನೆಗೆ ಬಂದ ಸತೀಶ್, ಸುಸ್ತಾಗಿದ್ದ. ಆದರೆ, ಕುಟುಂಬ ಸದಸ್ಯರ ಬಳಿ ಯಾವುದೇ ವಿಷಯ ಹೇಳಿರಲಿಲ್ಲ. ಮಾರನೇ ದಿನಕ್ಕೆ ವಾಟ್ಸ್ಆಯಪ್ ಗ್ರೂಪ್ನಲ್ಲಿ ಬೆತ್ತಲೆ ನೃತ್ಯದ ವಿಡಿಯೋ ವೈರಲ್ ಆಗಿರುವ ವಿಷಯ ಸತೀಶ್ ಅವರ ಪತ್ನಿಗೆ ಗೊತ್ತಾಗಿದೆ. ಈ ಬಗ್ಗೆ ಗಂಡನನ್ನು ಪತಿ ವಿಚಾರಿಸಿದಾಗ ಸತ್ಯಾಂಶ ಹೇಳಿದ್ದು, ನೊಂದ ಮಹಿಳೆ ಕೆ.ಆರ್.ಪುರ ಠಾಣೆಗೆ ಬಂದು ದೂರು ನೀಡಿದ್ದಾರೆ.