ನನ್ನ ಗಂಡನನ್ನು ಬೆತ್ತಲೆಗೊಳಿಸಿ ನಾಗಿಣಿ ಡಾನ್ಸ್​ ಮಾಡಿಸಿದ್ರು. ಆ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪತ್ನಿ

ನನ್ನ ಗಂಡನನ್ನು ಬೆತ್ತಲೆಗೊಳಿಸಿ ನಾಗಿಣಿ ಡಾನ್ಸ್​ ಮಾಡಿಸಿದ್ರು. ಆ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪತ್ನಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಹೀನ ಕೃತ್ಯವೊಂದು ನಡೆದಿದೆ. ಜ್ಯೋತಿಷಿ ಮತ್ತು ಆತನ ಸ್ನೇಹಿತನೊಬ್ಬ ಕ್ಯಾಬ್​ ಚಾಲಕರೊಬ್ಬರನ್ನ ಅಪಹರಣ ಮಾಡಿ ಬೆತ್ತಲೆಯಾಗಿಸಿ ನಾಗಿಣಿ ನೃತ್ಯ ಮಾಡಿಸಿದ್ದಾರೆ. ಅಲ್ಲದೆ ಆ ದೃಶ್ಯವನ್ನ ಮೊಬೈಲ್​ನಲ್ಲಿ ಸೆರೆಹಿಡಿದು ಅಮಾನವೀಯವಾಗಿ ವರ್ತಿಸಿದ್ದಾರೆ.

ಗಂಡನ ಮೇಲಾದ ಕಿರುಕುಳವನ್ನ ಸಹಿಸಲಾಗದೆ ಚಾಲಕನ ಪತ್ನಿಯೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಕೆ.ಆರ್​.ಪುರದ ಸತೀಶ್​ ಎಂಬಾತ ದೌರ್ಜನ್ಯಕ್ಕೆ ಒಳಗಾದ ಕ್ಯಾಬ್​ ಚಾಲಕ. ಈತನ ಪತ್ನಿ ಕೊಟ್ಟ ದೂರಿನ ಮೇರೆಗೆ ಆರೋಪಿ ದಯಾಳ್​ ಮಂಜ ಅಲಿಯಾಸ್​ ಪುಲಿ ಮಂಜ ಮತ್ತು ಇತರರ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಜ್ಯೋತಿಷ್ಯ ಹೇಳುತ್ತಿದ್ದ ದಯಾಳ್​ ಮಂಜ, ದೇಶ, ವಿದೇಶಕ್ಕೂ ಹೋಗಿ ಬರುತ್ತಿದ್ದ. ಇದರ ನಡುವೆ ಪರಿಚಿತ ಸತೀಶ್​ಗೆ 2 ಲಕ್ಷ ರೂ. ನೀಡಿದ್ದ. ಇದನ್ನು ವಾಪಸ್​ ಕೊಟ್ಟಿರಲಿಲ್ಲ. ಕುಪಿತಗೊಂಡ ದಯಾಳ್​ ಮಂಜ, ಏನಾದರೂ ಮಾಡಿ ಸತೀಶ್​ಗೆ ಬುದ್ಧಿ ಕಲಿಸಬೇಕೆಂದು ಸಂಚು ರೂಪಿಸಿದ್ದ. ಪರಿಚಿತ ಗಣೇಶ್​ ಎಂಬಾತನಿಗೆ ಸತೀಶ್​ನನ್ನು ಕರೆತರುವಂತೆ ಸೂಚಿಸಿದ್ದ. ಅದರಂತೆ ಗಣೇಶ್​ ನ.10ರಂದು ಸತೀಶ್​ನನ್ನು ಪುಸಲಾಯಿಸಿ ಮುಳಬಾಗಿಲು ಬಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ದಯಾಳ್​ ಮಂಜ ಮತ್ತು ಆತನ ಸಹಚರರು ಸೇರಿಕೊಂಡು ಸತೀಶ್​ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ನಾಗಿಣಿ ನೃತ್ಯ ಮಾಡಿಸಿದ್ದಾರೆ.

ಸತೀಶ್​ನನ್ನು ಬೆತ್ತಲೆ ಮಾಡಿ ನಾಗಿಣಿ ಡಾನ್ಸ್​ ಮಾಡಿಸಿದ್ದು, ಈ ದೃಶ್ಯವನ್ನು ಆರೋಪಿಗಳು ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಬಳಿಕ ಸತೀಶ್​ನನ್ನು ಬಿಟ್ಟು ಕಳುಹಿಸಿದ್ದರು. ಇತ್ತ ಆರೋಪಿ ದಯಾಳ್​ ಮಂಜ, ತಮ್ಮ ಜನಾಂಗದ ಎಂ. ರಾಮಾಪುರ ಗ್ರಾಮ ಸೇವಕರ ಸಂಘ ಮತ್ತು ಬುಡ್ಗ ಜಂಗಮ ವಾಟ್ಸ್​ಆಯಪ್​ ಗ್ರೂಪ್​ಗೆ ಆ ವಿಡಿಯೋವನ್ನು ಶೇರ್​ ಮಾಡಿದ್ದ. ಮನೆಗೆ ಬಂದ ಸತೀಶ್​, ಸುಸ್ತಾಗಿದ್ದ. ಆದರೆ, ಕುಟುಂಬ ಸದಸ್ಯರ ಬಳಿ ಯಾವುದೇ ವಿಷಯ ಹೇಳಿರಲಿಲ್ಲ. ಮಾರನೇ ದಿನಕ್ಕೆ ವಾಟ್ಸ್​ಆಯಪ್​ ಗ್ರೂಪ್​ನಲ್ಲಿ ಬೆತ್ತಲೆ ನೃತ್ಯದ ವಿಡಿಯೋ ವೈರಲ್​ ಆಗಿರುವ ವಿಷಯ ಸತೀಶ್​ ಅವರ ಪತ್ನಿಗೆ ಗೊತ್ತಾಗಿದೆ. ಈ ಬಗ್ಗೆ ಗಂಡನನ್ನು ಪತಿ ವಿಚಾರಿಸಿದಾಗ ಸತ್ಯಾಂಶ ಹೇಳಿದ್ದು, ನೊಂದ ಮಹಿಳೆ ಕೆ.ಆರ್​.ಪುರ ಠಾಣೆಗೆ ಬಂದು ದೂರು ನೀಡಿದ್ದಾರೆ.