ಶಿವಮೊಗ್ಗ: ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಶಖೆ - ಪ್ರಧಾನಿ ಅಭಿಮತ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.
ಮೊದಲಿಗೆ ರಾಷ್ಟ್ರಕವಿ ಕುವೆಂಪು ಅವರಿಗೆ ನಮನ ಸಲ್ಲಿಸಿದರು. ಕರ್ನಾಟಕ ಟೆಕ್ನಾಲಜಿ, ಸಂಸ್ಕೃತಿಯ ಸಂಗಮವಾಗಿದೆ.
ಏರ್ ಇಂಡಿಯಾ ಮಾತು: ಏರ್ ಇಂಡಿಯಾ ನಷ್ಟದಲ್ಲಿದ್ದ ವಿಚಾರಗಳು ವಿಶ್ವದೆಲ್ಲೆಡೆ ಚರ್ಚೆಯಲ್ಲಿತ್ತು. ಆದರೀಗ ಏರ್ ಇಂಡಿಯಾ ಅಭಿವೃದ್ಧಿಯ ಹಾದಿಯಲ್ಲಿದೆ. ಪ್ರಸ್ತುತ ಪ್ರಯಾಣಿಕ ವಿಮಾನಗಳನ್ನು ನಾವು ಬೇರೆ ದೇಶದಿಂದ ಖರೀದಿಸುತ್ತಿದ್ದೇವೆ. ಆದರೆ ಕೆಲವೇ ದಿನಗಳಲ್ಲಿ ದೇಶದಲ್ಲಿಯೇ ಪ್ರಯಾಣಿಕ ವಿಮಾನಗಳು ನಿರ್ಮಾಣವಾಗುತ್ತವೆ. ಸ್ವಾತಂತ್ರ್ಯ ಹಲವು ವರ್ಷಗಳು ಕಳೆದರೂ ದೇಶದಲ್ಲಿ ಏರ್ ಪೋರ್ಟ್ಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಗಳು ಈ ಬಗ್ಗೆ ಆದ್ಯತೆಯನ್ನೇ ನೀಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ 74 ಹೊಸ ನಿರ್ಮಾಣ ಮಾಡಿದೆ ಎಂದರು.
ಹವಾಯಿ ಚಪ್ಪಲ್ ಹಾಕುವವರುಕೂಡ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಉಡಾನ್ ಯೋಜನೆ ಆರಂಭಗೊಂಡಿತು. ನೇಚರ್, ಕಲ್ಚರ್, ಅಗ್ರಿಕಲ್ಚರ್ ಕೂಡಿರುವ ಶಿವಮೊಗ್ಗದ ಈ ಭೂಮಿ ಭವಿಷ್ಯದಲ್ಲಿ ಅಭಿವೃದ್ಧಿಯ ಕೇಂದ್ರವಾಗಲಿದೆ ಎಂದರು.
ಯಡಿಯೂರಪ್ಪಗೆ ಶ್ಲಾಘನೆ: ಇಂದು ಲೋಕಪ್ರಿಯ ಜನನೇತಾರ ಯಡಿಯೂರಪ್ಪ ಅವರ ಜನ್ಮದಿನ. ಅವರು ತಮ್ಮ ಜೀವನವನ್ನು ಬಡವರ, ರೈತರ ಕಲ್ಯಾಣಕ್ಕಾಗಿ ಮೀಸಲಿಸಿದ್ದಾರೆ. ಕೆಲ ದಿನಗಳ ಹಿಂದೆ ಕರ್ನಾಟಕ ವಿಧಾನಸಭೆಯಲ್ಲಿ ಆಡಿದ ಮಾತುಗಳು ಪ್ರತಿ ರಾಜಕಾರಣಿಗಳಿಗೆ ಪ್ರೇರಣೆ. ಅವರ ಜೀವನವೇ ನಮಗೆ ಪ್ರೇರಣೆ ಎಂದರು. ಇಂತಹ ಮಹಾನ್ ನೇತಾರರ ಜನ್ಮದಿನದಂದು ಮೊಬೈಲ್ ಪ್ಲ್ಯಾಶ್ ಲೈಟ್ ಆನ್ ಮಾಡಿ ಅವರಿಗೆ ಶುಭಕೋರುವಂತೆ ಜನಸ್ತೋಮಕ್ಕೆ ಮನವಿ ಮಾಡಿದರು. ಆಗ ಸಹಸ್ರ ಸಂಖ್ಯೆಯ ಜನರು ಪ್ಲ್ಯಾಶ್ ಲೈಟ್ ಮಾಡಿ ಯಡಿಯೂರಪ್ಪ ಎಂದು ಘೋಷಣೆ ಕೂಗಿದರು.
ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು: ಗಂಗಾಸ್ನಾನ ತುಂಗಾ ಪಾನ ಎಂಬ ನುಡಿಯಿದೆ. ಅದರಂತೆ ಈ ಶಿವಮೊಗ್ಗದಲ್ಲಿ ತುಂಗಾ ನದಿ ಹರಿಯುತ್ತಿದ್ದು ಶ್ರೇಷ್ಠ ಭೂಮಿಯಾಗಿದೆ ಎಂದು ನೆನಪಿಸಿಕೊಂಡರು. ಜೋಗ ಜಲಪಾತ, ಆಗುಂಬೆ ಸೂರ್ಯಾಸ್ತಮನ ತಾಣ, ಸಂಸ್ಖೃತವನ್ನೇ ಮಾತೃಭಾಷೆಯನ್ನಾಗಿಸಿಕೊಂಡಿರುವ ಮತ್ತೂರು ಗ್ರಾಮ, ಶ್ರೀ ಕೋಟೆ ಆಂಜನೇಯ, ಶ್ರೀ ಶ್ರೀಧರ ಸ್ವಾಮಿ ಆಶ್ರಮ, ಸಿಗಂಧೂರು ಚೌಡೇಶ್ವರಿ ದೇವಳಗಳ ಸ್ಮರಣೆ ಮಾಡಿದರು.
ರೈಲು ಕೋಚಿಂಗ್ ಸಂಸ್ಥೆ, ರೈಲು ಮಾರ್ಗ, ರಸ್ತೆ ಅಭಿವೃದ್ಧಿಯಿಂದ ಶೈಕ್ಷಣಿಕ ಕೇಂದ್ರವಾದ ಶಿವಮೊಗ್ಗ ಅಭಿವೃದ್ಧಿಯಾಗಲಿದೆ. ಇದರಿಂದ ಉದ್ಯಮಿಗಳಿಗೆ, ಯುವಕರಿಗೆ ಉದ್ಯೋಗ ಹೆಚ್ಚಲಿದೆ ಎಂದು ವಿವರಿಸಿದರು. ಜಲಜೀವನ್ ಮಿಷನ್ ಯೋಜನೆ ಮೂಲಕ ಜನರಿಗೆ ಶುದ್ಧ ನೀರು ನೀಡುವ ಯೋಜನೆ ನಡೆದಿದೆ. 40 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಕಾರ್ಯ ಮಾಡಿದೆ. ಶೌಚಾಲಯ, ಗ್ಯಾಸ್, ನೀರು ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.