'ವಂದೇ ಭಾರತ್' ಎಕ್ಸ್ಪ್ರೆಸ್ಗೆ ಸಂಭ್ರಮದ ಸ್ವಾಗತ

ಬೆಂಗಳೂರು: ಪರೀಕ್ಷಾರ್ಥ ಸಂಚಾರ ಆರಂಭಿಸಿರುವ 'ವಂದೇ ಭಾರತ್' ಎಕ್ಸ್ಪ್ರೆಸ್ ರೈಲು ಸೋಮವಾರ ಬೆಳಿಗ್ಗೆ 10.21ಕ್ಕೆ ಬೆಂಗಳೂರಿಗೆ ಬಂದಿತು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್) ರೈಲು ನಿಲ್ದಾಣಕ್ಕೆ ಬಂದ ರೈಲನ್ನು ಪ್ರಯಾಣಿಕರು ಮತ್ತು ಸಿಬ್ಬಂದಿ ಕರತಾಡನದೊಂದಿಗೆ ಸ್ವಾಗತಿಸಿದರು.
5.50ಕ್ಕೆ ಚೆನೈನಿಂದ ಹೊರಟ ರೈಲು, ಕಟ್ಪಾಡಿಯಲ್ಲಿ ನಿಲುಗಡೆಯಾಗಿ ಅಲ್ಲಿಂದ ನೇರವಾಗಿ ಕೆಎಸ್ಆರ್ ರೈಲು ನಿಲ್ದಾಣಕ್ಕೆ ಬಂದಿತು. ರೈಲಿನೊಳಗೆ ಪ್ರವೇಶಿಸಲು ಅಧಿಕಾರಿಗಳಿಗೆ ಮಾತ್ರ ಅವಕಾಶ ಇತ್ತು. ನೆರೆದಿದ್ದ ಪ್ರಯಾಣಿಕರು ರೈಲಿನೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
10.30ಕ್ಕೆ ಮೈಸೂರು ಕಡೆಗೆ ರೈಲು ಪ್ರಯಾಣ ಬೆಳೆಸಿತು. ಮಧ್ಯಾಹ್ನ ಮೈಸೂರಿನಿಂದ ಹೊರಟ ರೈಲು, 2.45ಕ್ಕೆ ಮತ್ತೆ ಕೆಎಸ್ಆರ್ ನಿಲ್ದಾಣ ಪ್ರವೇಶಿಸಿತು. 15 ನಿಮಿಷ ನಿಲುಗಡೆಯಾಗಿ ಮಧ್ಯಾಹ್ನ 3 ಗಂಟೆಗೆ ಚೆನ್ನೈನತ್ತ ಪ್ರಯಾಣ ಬೆಳೆಸಿತು.