ಪುನೀತ್ ಮಾದರಿಯಲ್ಲಿಯೇ ಇತರರಿಗೂ ಮಾದರಿಯಾದ ಶಾಸಕ ಅಮೃತ ದೇಸಾಯಿ

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ತಮ್ಮ 44ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಹೌದು ನರೇಂದ್ರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಸಾಯಿ ಅರಣ್ಯ ಕಲ್ಯಾಣಮಂಟಪದಲ್ಲಿ ಅಮೃತ ದೇಸಾಯಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಅಮೃತ ದೇಸಾಯಿ ಹಾಗೂ ಅವರ ಧರ್ಮಪತ್ನಿ ಪ್ರಿಯಾ ಅವರು ಮರಣಾನಂತರ ನೇತ್ರದಾನ ಮಾಡುವುದಾಗಿ ಸಹಿ ಮಾಡಿದರು. ಅಲ್ಲದೇ ಅಮೃತ ದೇಸಾಯಿ ಗೆಳೆಯರ ಬಳಗದ ನೂರಾರು ಜನ ಸದಸ್ಯರು ರಕ್ತದಾನವನ್ನೂ ಮಾಡಿದರು. ಆ ಮೂಲಕ ಶಾಸಕ ಅಮೃತ ಅವರು ತಮ್ಮ ಹುಟ್ಟುಹಬ್ಬವನ್ನು ಸಾರ್ಥಕತೆಯಿಂದ ಆಚರಿಸಿಕೊಂಡರು.ಪುನೀತ್ ರಾಜಕುಮಾರ್ ಅವರು ತಮ್ಮ ಸಾವಿನ ನಂತರವೂ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಅದೇ ಮಾದರಿಯಲ್ಲಿ ನಾವೂ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗುವ ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.ಇನ್ನು ಶಾಸಕರ ಧರ್ಮಪತ್ನಿ ಪ್ರಿಯಾ ಅವರು ನೇತ್ರದಾನಕ್ಕೆ ನಿರ್ಧಾರ ಮಾಡಿದ್ದಷ್ಟೇ ಅಲ್ಲದೇ ರಕ್ತದಾನವನ್ನೂ ಮಾಡಿ ಸಾರ್ಥಕತೆ ಮೆರೆದರು. ಕೇವಲ ಶಾಸಕರ ಕುಟುಂಬವಷ್ಟೇ ಅಲ್ಲದೇ ಅಮೃತ ದೇಸಾಯಿ ಅವರ ನೂರಾರು ಜನ ಅಭಿಮಾನಿಗಳು ಅವರ ಹುಟ್ಟುಹಬ್ಬದಂದೇ ನೇತ್ರದಾನಕ್ಕೆ ನಿರ್ಧಾರ ಮಾಡಿ ಸಹಿ ಹಾಕಿದರು. ಒಟ್ಟಾರೆಯಾಗಿ ಶಾಸಕ ಅಮೃತ ದೇಸಾಯಿ ಅವರು ತಮ್ಮ ಹುಟ್ಟುಹಬ್ಬವನ್ನು ಅಂಧರ ಬಾಳಿಗೆ ಬೆಳಕಾಗಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.ಒಟ್ಟಿನಲ್ಲಿ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಜನ್ಮದಿನಾಚರಣೆ ಮಾದರಿ ಕೆಲಸ ನೋಡಿದ್ರೆ. ಅಪ್ಪು ಮಾದರಿಯಲ್ಲಿಯೇ ಶಾಸಕರು ಇತರರಿಗೂ ಮಾದರಿಯಾಗಿದ್ದಾರೆ...