ಕುರ್ಚಿ ಆಸೆ ಇನ್ನೂ ಬಂದಿಲ್ಲ ಪ್ರಧಾನಿ ಮೋದಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ

ಬೆಂಗಳೂರು: 'ರಾಜಕಾರಣದಲ್ಲಿ ಇಲ್ಲದೆಯೂ ನಾನು ಹಿಂದೆಯೇ ಸಮಾಜ ಸೇವೆ ಶುರುಮಾಡಿದ್ದೇನೆ. ಅದಕ್ಕೆ ರಾಜಕೀಯಕ್ಕೆ ಬರಬೇಕು ಅಂತಿಲ್ಲ. ರಾಜಕೀಯ ಪಕ್ಷಗಳು ಇಲ್ಲದೆಯೇ ನನಗೆ ಫ್ಯಾನ್ಸ್ ಪಕ್ಷ, ಗೆಳೆಯರ ಪಕ್ಷ, ಬಳಗದ ಪಕ್ಷ ಅಂತ ತುಂಬ ಪಕ್ಷಗಳಿವೆ.
ಮೋದಿಯವರನ್ನು ಇಡೀ ದೇಶ ಒಪ್ಪಿದೆ…
ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿದ ಸುದೀಪ್, 'ಮೋದಿ ಆಡಳಿತದ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಅವರು ಎಂದಿದ್ದರೂ ನಮ್ಮ ಪಿಎಂ. ಅವರಿಗೆ ನಮ್ಮ ಗೌರವ, ಪ್ರೀತಿ ಎಂದಿಗೂ ಇರುತ್ತದೆ. ಅವರ ಆಡಳಿತವನ್ನು ಇಡೀ ದೇಶವೇ ಒಪ್ಪಿಕೊಂಡಿದೆ ಅಂದಮೇಲೆ ನಾನು ಹೇಳುವುದೇನಿದೆ?' ಎಂದರು.
ಒಪ್ಪಿದ ಕಾರ್ಯಕ್ರಮಕ್ಕೆ ಹೋಗದೇ ಇರುವುದಿಲ್ಲ…
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಬರಲಿಲ್ಲವೆಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ ಸುದೀಪ್, 'ಒಂದು ಸಣ್ಣ ಸಂವಹನ ಕೊರತೆಯಷ್ಟೇ. ಸಾಮಾನ್ಯವಾಗಿ ನಾನು ಯಾವುದೇ ಕಾರ್ಯಕ್ರಮ ಒಪ್ಪಿಕೊಂಡರೆ ಹೋಗದೇ ಇರುವುದಿಲ್ಲ. ದಾವಣಗೆರೆ ಕಾರ್ಯಕ್ರಮದ ಬಗ್ಗೆ ಮನೆಗೆ ಆಮಂತ್ರಣ ಪತ್ರಿಕೆ ಕೊಟ್ಟಿದ್ದರಷ್ಟೇ. ನಾನು ಬರುತ್ತೇನೆ ಅಂತ ಒಪ್ಪಿಕೊಂಡಿರಲಿಲ್ಲ. ಯಾರು ತಪ್ಪು, ಯಾರು ಸರಿ ಎಂದು ನಾನು ಹೇಳುವುದಿಲ್ಲ. ಕೊನೆಗೆ ಸ್ಪಷ್ಟನೆ ನೀಡಿದ್ದೇನೆ. ಈಗ ಯಾರ ಮೇಲೂ ಆರೋಪ ಹೊರಿಸಲು ಇಷ್ಟವಿಲ್ಲ. ಜನರನ್ನು ನೋಡಿದಾಗ ನನಗೂ ಬೇಸರವಾಯಿತು. ನಾನು ಬರುತ್ತೇನೆ ಅಂದರೆ, ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ' ಎಂದರು.