ಕರ್ನಾಟಕದ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್ ಒಳಜಗಳ ಸರಿಪಡಿಸಲಿ: ಸಿಎಂ ಬೊಮ್ಮಾಯಿ

ಕರ್ನಾಟಕದ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್ ಒಳಜಗಳ ಸರಿಪಡಿಸಲಿ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ, ಫೆಬ್ರವರಿ 19: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್‌ನ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಕರ್ನಾಟಕ ರಾಜ್ಯದ ಬಗ್ಗೆ ಏನು ಗೊತ್ತು. ಅವರು ಮೊದಲು ಕಾಂಗ್ರೆಸ್‌ ಒಳಜಗಳಗಳನ್ನು ಸರಿಪಡಿಸಿ ನಂತರ ನಮ್ಮ ರಾಜ್ಯದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಸುದ್ದಿಗಾರ ಪ್ರಶ್ನೆಗಳಿಗೆ ಉತ್ತರಿಸಿದರು. ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ನರಕ ಸೃಷ್ಟಿಯಾಗಿದೆ ಇತ್ತೇಚೆಗೆ ಸುರ್ಜೇವಾಲಾ ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕಾಂಗ್ರೆಸ್‌ನವರು ಸೃಷ್ಟಿಸಿದ್ದ ನರಕದಿಂದಲೇ ಅವರನ್ನು ಜನರೇ ಮನೆಗೆ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿಯುವಾದ ವಿರೋಧ ಪಕ್ಷ ಕಾಂಗ್ರೆಸ್. ಜನರಿಗೆ ತಮ್ಮ, ನಮ್ಮ ವೈಫಲ್ಯಗಳನ್ನು ತೋರಿಸುವ ಬದಲು ಈ ರೀತಿಯ ಮಾತುಗಳು ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ತಿರುಗೇಟು ನೀಡಿದರು.

ಕರ್ನಾಟಕದ ಜನರಿಗೆ ಯಾರು ಯಾರು ಅಸುರರು, ಯಾರು ದೇವತೆಗಳು ಎಂಬುದು ಸರಿಯಾಗಿ ತಿಳಿದಿದೆ. ಸುಮಾರು 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನ್ನು ಕಿತ್ತೊಗೆದು ಅಸುರರು ಯಾರೆಂದು ಜನರೇ ತೋರಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಅಸುರರ ದೊಡ್ಡ ಪಟ್ಟಿಯೇ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾದಂತಿದೆ. ಅವರಿಗೂ ನಮಗೂ ಬಹಳಷ್ಟು ವ್ಯತ್ಯಾಸಗಳು ಇವೆ. ಅವರು ಚುನಾವಣೆಗಾಗಿ ಆಕಾಶ ತೋರಿಸಿ ಜನರನ್ನು ಮರಳು ಮಾಡಲು ಹೊರಟಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ. ಅವರೇ ನಮ್ಮನ್ನು ನಕಲು ಮಾಡಿದ್ದಾರೆ. ಬಿಜೆಪಿ ಗೃಹಿಣಿ ಶಕ್ತಿ ನೀಡಿದ ಮೇಲೆ ಅವರು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದಾರೆ. ಇದರಿಂದ ಯಾರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಸರ್ಕಾರದಿಂದ ಅನುಷ್ಠಾನ ಸಮಿತಿ ರಚನೆ

ಹಿಂದಿನ ವರ್ಷದ ಬಜೆಟ್‌ನ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಬಹುತೇಕ ಶೇಕಡಾ 90ರಷ್ಟು ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ ಅನುಷ್ಠಾನ ಮಾಡಲಿದ್ದೇವೆ ಎಂದು ತಿಳಿಸಿದರು.

ಚುನಾವಣೆ ಬಳಿಕ ಶಾಶ್ವತ ಹೂವಿರಲಿದೆ

ವಿರೋಧ ಪಕ್ಷದವರು ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನ ಆರಂಭಿಸಿರುವ ಬಗ್ಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಇಷ್ಟು ದಿನ ಜನರಿಗೆ ಕಾಂಗ್ರೆಸ್‌ನವರು ಕಿವಿ ಮೇಲೆ ಹೂವಿಟ್ಟಿದ್ದರು. ಇನ್ಮುಂದೆ ಜನರೇ ಕಾಂಗ್ರೆಸ್‌ನವರ ಕಿವಿ ಮೇಲೆ ಹೂವಿಡುತ್ತಾರೆ. ಈ ಬಗ್ಗೆ ವಿಧಾನಸಭೆಯಲ್ಲಿಯೇ ಉತ್ತರಿಸಲಾಗಿದೆ. ಶಾಶ್ವತವಾಗಿ ಅವರ ಕಿವಿಗಳ ಮೇಲೆ ಹೂವಿರಲಿದೆ. ಚುನಾವಣೆಯಾದ ನಂತರ ಅವರ ಕಿವಿ ಮೇಲೆ ಶಾಶ್ವತವಾಗಿ ಹೂವಿರಲಿದೆ.

ನಿತೇಶ್ ಕುಮಾರ್ ಅವರು ಎಷ್ಟು ಬಾರಿ ಬಣ್ಣ ಬದಲಾಯಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಬಣ್ಣ ಬದಲಾಯಿಸುವ ವ್ಯಕ್ತಿಯ ಮಾತಿಗೆ ಏನು ಉತ್ತರ ನೀಡಲು ಸಾಧ್ಯ ಎಂದರು.

ಉ-ಕ ಪತ್ರಕರ್ತರಿಗೆ ಪ್ರಾತಿನಿಧ್ಯ

ಮಾಧ್ಯಮ ಅಕಾಡೆಮಿಯಿಂದ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ, ಅಕಾಡೆಮಿಗೆ ನಾಮಕರಣವಾಗುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಸರ್ಕಾರ ಕ್ರಮ ವಹಿಸಲಿದೆ. ಇನ್ನೂ ಮಹದಾಯಿ ಯೋಜನೆಯು ಶೀಘ್ರವೇ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.