ವಿಧಾನಸೌಧ ಬಳಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣ: ಕೊನೆಗೂ ಹಣದ ಪತ್ತೆ ಹಚ್ಚಿದ ಪೊಲೀಸರು!

ವಿಧಾನಸೌಧ ಬಳಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣ: ಕೊನೆಗೂ ಹಣದ ಪತ್ತೆ ಹಚ್ಚಿದ ಪೊಲೀಸರು!

ಬೆಂಗಳೂರು: ವಿಧಾನಸೌಧದ ಬಳಿ ಈ ಹಿಂದೆ ಹತ್ತು ಲಕ್ಷ ರೂ. ಹಣ ಪತ್ತೆಯಾಗಿದ್ದ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ವಿಧಾನಸೌಧ ಠಾಣಾ ಪೊಲೀಸರು ಕೊನೆಗೂ ಹಣದ ಮೂಲವನ್ನು ಪತ್ತೆ ಹಚ್ಚಿದ್ದಾರೆ.

ಇಂಜಿನಿಯರ್​ ಜಗದೀಶ್​ ಮೂವರು ವ್ಯಕ್ತಿಗಳಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ.

ಗುತ್ತಿಗೆದಾರರೊಬ್ಬರಿಂದ ಐದು ಲಕ್ಷ ಹಾಗೂ ತನ್ನಿಬ್ಬರು ಸಹೋದ್ಯೋಗಿಗಳ ಬಳಿ ತಲಾ 3.5 ಮತ್ತು 1.5 ಲಕ್ಷ ರೂ. ಹಣ ಸಾಲ ಪಡೆದಿದ್ದ. ಜಗದೀಶ್​ಗೆ ಹಣ ಕೊಟ್ಟ ಮೂವರು ವ್ಯಕ್ತಿಗಳನ್ನು ವಿಚಾರಣೆ ನಡೆಸಿರುವ ವಿಧಾನಸೌಧ ಪೊಲೀಸರು ಹೇಳಿಕೆನ್ನು ದಾಖಲಿಸಿದ್ದಾರೆ.

ಪೊಲೀಸರ ತನಿಖೆ ವೇಳೆ ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ಇರುವುದು ಬೆಳಕಿಗೆ ಬಂದಿದೆ. ಚೆಕ್​​ಬೌನ್ಸ್ ಪ್ರಕರಣ ಸಂಬಂಧ ಹಣ ಮರುಪಾವತಿಗೆ ಜಗದೀಶ್​ ಹಣ ಹೊಂದಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಹಣ ಕೊಟ್ಟವರ ಹೇಳಿಕೆ ದಾಖಲಿಸಿ, ಅಂತಿಮ ಹಂತದ ತನಿಖೆಯನ್ನು ನಡೆಸಲಾಗುತ್ತಿದೆ.

ಚೆಕ್​​​ಬೌನ್ಸ್ ಸಂಬಂಧ ಬ್ಯಾಂಕ್ ವ್ಯವಹಾರ ಮಾಹಿತಿ, ಪ್ರಕರಣ ವಿವರಗಳ ಸಂಗ್ರಹ ಮಾಡಿರುವ ವಿಧಾನಸೌಧ ಪೊಲೀಸರು ಅಂತಿಮ ಹಂತದ ತನಿಖೆ ನಡೆಸಿ, ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.

ಪ್ರಕರಣ ಹಿನ್ನೆಲೆ
ಜನವರಿ 5ರಂದು ವಿಧಾನಸೌಧದ ಪೂರ್ವ ಗೇಟ್​ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಕೇಂದ್ರ ಡಿಸಿಪಿ ಶ್ರೀನಿವಾಸ ಗೌಡ ಹೇಳಿಕೆ ನೀಡಿ, PWD ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್​ ಹಣದ ಸಹಿತ ಬಂದಿದ್ದರು. ಈ ವೇಳೆ ವಿಧಾನ ಸೌಧ ಮತ್ತು ವಿಕಾಸ ಸೌಧದ ಭದ್ರತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಬಳಿ ಸರಿಯಾದ ಉತ್ತರ ಇಲ್ಲ. ಸದ್ಯ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದರು. (ದಿಗ್ವಿಜಯ ನ್ಯೂಸ್​)