ವಸತಿ ರಹಿತರಿಗೆ ಗುಡ್ ನ್ಯೂಸ್ : ವಸತಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬಳ್ಳಾರಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2022-23ನೇ ಸಾಲಿನ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಯೋಜನೆಯಡಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ ಮತ್ತು ವಸತಿ ರಹಿತರಿಗೆ ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್ಬಾಬು ಅವರು ತಿಳಿಸಿದ್ದಾರೆ.
ಅರ್ಜಿಗಳನ್ನು ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಮಾರ್ಚ್ 20 ರೊಳಗಾಗಿ ಸಲ್ಲಿಸಬೇಕು.
ನಿಬಂಧನೆಗಳು: ವಸತಿ ಸೌಲಭ್ಯದ ಫಲಾನುಭವಿಗಳು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರೆಂದು ಗುರುತಿಸಲ್ಪಟ್ಟಿರಬೇಕು. ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯತೆಯನ್ನು ನೀಡಲಾಗುವುದು. ಅರ್ಜಿದಾರರು ಇತರೆ ಯಾವುದೇ ಯೋಜನೆ, ಇಲಾಖೆ, ನಿಗಮಗಳಿಂದ ವಸತಿ ಸೌಲಭ್ಯವನ್ನು ಪಡೆದಿರಕೂಡದು. ವಸತಿ ರಹಿತರು ಸ್ವಂತ ನಿವೇಶನ ಹೊಂದಿರಬೇಕು ಹಾಗೂ ನಿವೇಶನವು ಕುಟುಂಬದವರ ಹೆಸರಿನಲ್ಲಿ ನೊಂದಣಿಯಾಗಿರಬೇಕು. ಕನಿಷ್ಠ 20 ವರ್ಷಗಳವರೆಗೆ ನಿವೇಶನವನ್ನು ಪರಬಾರೆ ಮಾಡತಕ್ಕದ್ದಲ್ಲ. ಕುಟುಂಬದ ಒಟ್ಟು ವಾರ್ಷಿಕ ವರಮಾನ ರೂ.2 ಲಕ್ಷಗಳ ಮಿತಿಯೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರದ ಡಿ.ದೇವರಾಜ ಅರಸು ಭವನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಅಥವಾ ದೂ.08392-275751 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.