ಜಮೀನಿನ ಖಾತೆ ಬದಲಾವಣೆಗೆ ₹ 5 ಲಕ್ಷ ಲಂಚ: ಕೆಎಎಸ್‌ ಅಧಿಕಾರಿ ವರ್ಷಾ ಒಡೆಯರ್‌ ಬಂಧನ

ಜಮೀನಿನ ಖಾತೆ ಬದಲಾವಣೆಗೆ ₹ 5 ಲಕ್ಷ ಲಂಚ: ಕೆಎಎಸ್‌ ಅಧಿಕಾರಿ ವರ್ಷಾ ಒಡೆಯರ್‌ ಬಂಧನ

ಬೆಂಗಳೂರು: ಜಮೀನಿನ ಖಾತೆ ಬದಲಾವಣೆಗೆ ₹ 5 ಲಕ್ಷ ಲಂಚ ಪಡೆಯುತ್ತಿದ್ದ ಕೆಎಎಸ್‌ ಅಧಿಕಾರಿ, ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್‌ ವರ್ಷಾ ಒಡೆಯರ್‌ ಹಾಗೂ ಮಧ್ಯವರ್ತಿ ರಮೇಶ್‌ ಎಂಬುವ ವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರ

ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ವ್ಯಾಪ್ತಿಯ ಕೆಂಗನಹಳ್ಳಿ ಗ್ರಾಮದಲ್ಲಿ ಲಲಿತ್‌ ಕುಮಾರ್‌ ಎಂಬುವವರಿಂದ 2 ಎಕರೆ ಜಮೀನು ಖರೀದಿಸಿದ್ದರು. ಆದರೆ, ಲಲಿತ್‌ ಅವರ ಹೆಸರೇ ಪಹಣಿಯಲ್ಲಿ ನಮೂದಾಗಿರಲಿಲ್ಲ. ಅವರ ಪರವಾಗಿ ಕಾಂತರಾಜು ಉಪ ವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪಹಣಿಯಲ್ಲಿ ಲಲಿತ್‌ ಹೆಸರು ನಮೂದಿ ಸುವಂತೆ ಉಪ ವಿಭಾಗಾಧಿಕಾರಿ ನ್ಯಾಯಾಲಯ ಅ.22ರಂದು ಆದೇಶ ಹೊರಡಿಸಿತ್ತು.

ಉಪ ವಿಭಾಗಾಧಿಕಾರಿ ಆದೇಶದಂತೆ ಪಹಣಿ ತಿದ್ದುಪಡಿಗೆ ಕಾಂತರಾಜುಅರ್ಜಿ ಸಲ್ಲಿಸಿದ್ದರು. ಪ್ರತಿ ಎಕರೆಗೆ ₹ 5 ಲಕ್ಷದಂತೆ ₹ 10 ಲಕ್ಷ ಲಂಚ ನೀಡು ವಂತೆ ವಿಶೇಷ ತಹಶೀಲ್ದಾರ್‌ ಮಧ್ಯವರ್ತಿ ರಮೇಶ್‌ ಮೂಲಕ ಅರ್ಜಿದಾರರಿಗೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಅರ್ಜಿದಾರರು ಲೋಕಾ ಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 'ಮಂಗಳವಾರ ಸಂಜೆ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ ವಾಹನ ನಿಲುಗಡೆ ತಾಣದ ಬಳಿ ಬಂದು ಹಣ ತಲುಪಿಸುವಂತೆ ಮಧ್ಯವರ್ತಿ ಸೂಚಿಸಿದ್ದರು. ಅಲ್ಲಿಗೆ ತೆರಳಿದ ಕಾಂತರಾಜು ₹ 5 ಲಕ್ಷ ನೀಡಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ರಮೇಶ್‌ ಅವರನ್ನು ಬಂಧಿಸಿದರು. 'ನನ್ನದೇನೂ ತಪ್ಪಿಲ್ಲ. ತಹಶೀಲ್ದಾರ್‌ ವರ್ಷಾ ಅವರ ಸೂಚನೆಯಂತೆ ಹಣ ಪಡೆದಿದ್ದೇನೆ' ಎಂದು ಮಧ್ಯವರ್ತಿ ತನಿಖಾ ತಂಡಕ್ಕೆ ಉತ್ತರಿಸಿದರು. ಅಲ್ಲಿಂದ ವಾಪಸ್‌ ವಿಶೇಷ ತಹಶೀಲ್ದಾರ್‌ ಕಚೇರಿಗೆ ಬಂದ ರಮೇಶ್‌, 'ಮೇಡಂ ವ್ಯವಹಾರ ಮುಗಿದಿದೆ' ಎಂದರು. 'ಹಣ ಕೊಡು' ಎಂದು ವರ್ಷಾ ₹ 5 ಲಕ್ಷ ಪಡೆದುಕೊಂಡರು' ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.