ನಾನು ಆರೋಗ್ಯ ಸಚಿವನಾಗಲು ಡಾ.ಜಿ.ಪರಮೇಶ್ವರ್ ಅವರೇ ಕಾರಣ: ಸಚಿವ ಡಾ.ಸುಧಾಕರ್

ನಾನು ಆರೋಗ್ಯ ಸಚಿವನಾಗಲು ಡಾ.ಜಿ.ಪರಮೇಶ್ವರ್ ಅವರೇ ಕಾರಣ: ಸಚಿವ ಡಾ.ಸುಧಾಕರ್

ಕೊರಟಗೆರೆ: ನನಗೆ ಎಂಬಿಬಿಎಸ್ ಮಾಡಲು1993 ರಲ್ಲಿ ಡಾ. ಜಿ ಪರಮೇಶ್ವರವರು ಸೀಟ್ ಕೊಟ್ಟಿದ್ದರು. ಪ್ರಥಮ ಬಾರಿ ಎಂದರೆ 2013 ರಲ್ಲಿ ಮೊದಲ ಬಾರಿ ಶಾಸಕನಾಗಲು ಅವರೇ ಟಿಕೆಟ್ ನೀಡಿದ್ದರು.

ಈ ಎಲ್ಲಾ ಅವಕಾಶದಿಂದಲೇ ನಾನು ಇಂದು ಆರೋಗ್ಯ ಸಚಿವನಾಗಲು ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಅವರು ದೊಡ್ಡಸಾಗ್ಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ , ನಾವೀಗ ಬೇರೆ ಬೇರೆ ಪಕ್ಷದಲ್ಲಿದ್ದೇವೆ. ಅದರೆ ಬೇರೆ ಮಾತು ನಾನು ರಾಜಕೀಯದ ಭಾಷಣ ಮಾಡಲು ಬಂದಿಲ್ಲ.ಡಾ.ಜಿ ಪರಮೇಶ್ವರರವರ ಆದರ್ಶದಾಯಕ ಆತ್ಮೀಯ ಮಾತು.ಮೃದು ಸ್ವಭಾವದವರು ಎಲ್ಲರನ್ನೂ ಪ್ರೀತಿ ಮಾಡುವಂತವರು ಎಂದು ಬಣ್ಣಿಸಿದರು.

ಕಳೆದ 2013ರಲ್ಲಿ ಅವರ ಜೊತೆಯಲ್ಲಿಯೇ ಇದ್ದೆ. ನೀವು ಸರಿಯಾಗಿ ಆಶೀರ್ವಾದ ಮಾಡಿದ್ದಿದ್ದರೆ ಈ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದರು. ನಿಮ್ಮ ಮೇಲೆ ಆ ಒಂದು ಬೇಸರವಿದೆ. 2013 ರಲ್ಲಿ ಸೋಲಾಗಿದ್ದು ದುರದೃಷ್ಟ. ನಾವು ಅಂದು ದೊಡ್ಡ ಕನಸನ್ನು ಕಟ್ಟಿಕೊಂಡಿದ್ದೇವು. ಅದರೆ ಭವಿಷ್ಯದಲ್ಲಿ ಅವರಿಗೆ ಉತ್ತಮ ಅವಕಾಶವಿದೆ.ಆ ಭಗವಂತ ಆಶೀರ್ವಾದ ಮಾಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ ಎಂದರು.

ನಾನು ಎರಡೂ ಬಾರಿ ನಾಮ ಪತ್ರ ಸಲ್ಲಿಸ ಬೇಕಾದಾಗಲೂ ಕೂಡ ಅವರ ಧರ್ಮಪತ್ನಿಯವರೂ ನನಗೆ ತಾಯಿಯ ಸಮಾನರಾಗಿರುವ ಕನ್ನಿಕಾದೇವಿಯವರೂ ಮತ್ತು ಪರಮೇಶ್ವರ್ ಅವರ ಹತ್ತಿರ ಆಶೀರ್ವಾದ ಪಡೆದೇ ನಾಮ ಪತ್ರ ಸಲ್ಲಿಸಿದ್ದೆ. ಅದರೆ 2019 ರ ವೇಳೆಗೆ ನಾನು ಬಿಜೆಪಿಯಿಂದ ನಾಮಪತ್ರ ಸಲ್ಲಿಸುವಾಗಲೂ ಮನಸ್ಸಿನಲ್ಲಿಯೇ ನೆನೆದು ಸಲ್ಲಿಸಿದ್ದೇನೆ. ಇಂದು ಅವರ ಕ್ಷೇತ್ರಕ್ಕೆ ಆರೋಗ್ಯ ಭಾಗ್ಯವನ್ನೂ ಕೋಡುತ್ತಿರುವುದು ನನ್ನ ಭಾಗ್ಯ. ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ ಋಣ ತಿರಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರ ಆತ್ಮೀಯತೆ ಎಂದೂ ಮರೆಯಲೂ ಸಾಧ್ಯವಿಲ್ಲ. ತುಮಕೂರು ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಿಯಿಲ್ಲ ಎಂದರು.

17 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸುಧಾಕರ್ ಚಾಲನೆ

ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ, ಬುಕ್ಕಾಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಏರ್ಪಡಿಸಲಾಗಿದ್ದ 5 ಕೋಟಿ ರೂ. ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ ಕಟ್ಟಡದ ಉದ್ಘಾಟನೆ ಹಾಗೂ 12 ಕೋಟಿ 50 ಲಕ್ಷ ರೂ. ವೆಚ್ಚದ ತೋವಿನಕೆರೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ನನ್ನ ನಡುವೆ ತಂದೆ-ಮಗನ ಸಂಬಂಧವಿದೆ.ಅವರ ಅಭಿಮಾನಕ್ಕೆ ನಾನು ಅಭಾರಿ ಆಗಿದ್ದೇನೆ. ಆರೋಗ್ಯ ಸೇವೆಯಲ್ಲಿ ಸುಧಾಕರ್ ಜನರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಕೊರೊನಾ ನಿರ್ವಹಣೆಯ ಜವಾಬ್ದಾರಿಯಲ್ಲಿ ಯಶಸ್ಸು ಕಂಡಿದ್ದಾರೆ. ಕೊರಟಗೆರೆಗೆ ಸಾರ್ವಜನಿಕ ಆಸ್ಪತ್ರೆ, ವೈದ್ಯಕೀಯ ತಂಡ ಮತ್ತು ಸಿಬ್ಬಂದಿಗಳನ್ನು ಕೋಟ್ರೇ ನೀವೇ ನನ್ನ ಕ್ಷೇತ್ರದ ನಿಜವಾದ ದೇವರು ಎಂದು ತಿಳಿಸಿದರು.