ಜವಾಹರ್ ನವೋದಯ ವಿದ್ಯಾಲಯ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಜವಾಹರ್ ನವೋದಯ ವಿದ್ಯಾಲಯ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಡಿಕೇರಿ: 'ಅತ್ಯುತ್ತಮ ಶಿಕ್ಷಣ ನೀಡುವ ಜವಾಹರ್ ನವೋದಯ ವಿದ್ಯಾಲಯವು 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು, 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಇದರ ಲಾಭ ಪಡೆಯಬೇಕು' ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮನವಿ ಮಾಡಿದರು.

'ನವೋದಯ ವಿದ್ಯಾಲಯವು ಸರ್ಕಾರದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು. ಸಂಪೂರ್ಣ ಉಚಿತ ಶಿಕ್ಷಣ ಇಲ್ಲಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಇಲ್ಲಿ ವಿಫುಲ ಅವಕಾಶವಿದೆ. ಪೋಷಕರು ಹಾಗೂ ಶಿಕ್ಷಕರು 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಹಾಕುವಂತೆ ಪ್ರೇರೇಪಿಸಬೇಕು' ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಅರ್ಜಿಯನ್ನು ಆನ್‍ಲೈನ್ ಮೂಲಕವೇ ಸಲ್ಲಿಸಬೇಕಿದ್ದು, ಜ. 31 ಕೊನೆಯ ದಿನ. ಏಪ್ರಿಲ್ 29ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಎದುರಿಸಲು ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.

ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಆಯಾಯ ಜಿಲ್ಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 80 ವಿದ್ಯಾರ್ಥಿಗಳಿಗೆ ಪ್ರವೇಶವಕಾಶವಿದೆ ಎಂದರು.

'ಈ ಪ್ರವೇಶ ಪರೀಕ್ಷೆ ಎದುರಿಸುವುದರಿಂದ, ಅಂಬೇಡ್ಕರ್, ಏಕಲವ್ಯ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಕನಕದಾಸ, ನಾರಾಯಣಗುರು ಹೀಗೆ ರಾಜ್ಯದ ಹಲವು ವಸತಿ ಶಾಲೆಗಳ ಪ್ರವೇಶಕ್ಕೂ ಅನುಕೂಲವಾಗಲಿದೆ. ಇದರಿಂದ ಭವಿಷ್ಯದಲ್ಲಿ 'ನೀಟ್', 'ಸಿಇಟಿ', 'ಜೆಇಇ' ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗಲಿದೆ ಎಂದು ಪ್ರತಿ‍ಪಾದಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮದಂತೆ ಮೀಸಲಾತಿ ಇದೆ. ಕನಿಷ್ಠ 1/3 ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿದೆ. ಕನಿಷ್ಠ 75 ಸ್ಥಾನಗಳನ್ನು ಆಯಾಯ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನವೋದಯ ವಿದ್ಯಾಲಯದಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು, ಊಟ ಮತ್ತು ವಸತಿ ಸೌಲಭ್ಯ, ವಲಸೆ ನೀತಿಯ ಮುಖಾಂತರ ವಿಶಾಲ ಸಾಂಸ್ಕೃತಿಕ ವಿನಿಮಯ, ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್‍ಎಸ್‍ಎಸ್ ಹೀಗೆ ಹಲವು ಸೌಲಭ್ಯ ಒಳಗೊಂಡಿದೆ ಎಂದು ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, 3 ಮತ್ತು 4 ನೇ ತರಗತಿಯಲ್ಲಿ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಓದಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಹಾಗೂ 2011ರ ಮೇ, 01 ರಿಂದ 2013 ರ ಏಪ್ರಿಲ್, 30, 2013 ರೊಳಗೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎನ್.ಮಂಜುನಾಥ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ದಿವಾಕರ ಇದ್ದರು.

ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ

ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ಮಾತನಾಡಿ, 'ನವೋದಯ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಜೆಇಇ ವಿಭಾಗದಲ್ಲಿ ಶೇ 56.6ರಷ್ಟು, ನೀಟ್ ಪರೀಕ್ಷೆಯಲ್ಲಿ ಶೇ 78ರಷ್ಟು ಸಾಧನೆ ಮಾಡಿದ್ದಾರೆ. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 99.71ರಷ್ಟು ಹಾಗೂ 12ನೇ ತರಗತಿಯಲ್ಲಿ ಶೇ 98.93ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದರು.

ಮಾಹಿತಿಗಾಗಿ ಸಂಪರ್ಕಿಸಿ

ಮಾಹಿತಿಗೆ ವೆಬ್‍ಸೈಟ್ https://navodaya.gov.in ಅಥವಾ cbseitms.rcil.gov.in/nvs ಹಾಗೂ ಜವಾಹರ್ ನವೋದಯ ವಿದ್ಯಾಲಯದ ಕಚೇರಿ ಅಧೀಕ್ಷಕರಾದ ಕೆ.ರವಿ (96638 83213), ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ್ ಕುಮಾರ್ (99014 23273), ಜೆಎಸ್‍ಎ ಸಿ.ಆರ್.ಜನನಿ (77608 98148) ಅವರನ್ನು ಸಂಪರ್ಕಿಸಬಹುದು.