ಮಹದಾಯಿ ಹೋರಾಟಗಾರರಿಗೆ ಸಮನ್ಸ್‌: ಸಿ.ಎಂ ಬೊಮ್ಮಾಯಿ ವಿರುದ್ಧ ಕಿಡಿ

ಮಹದಾಯಿ ಹೋರಾಟಗಾರರಿಗೆ ಸಮನ್ಸ್‌: ಸಿ.ಎಂ ಬೊಮ್ಮಾಯಿ ವಿರುದ್ಧ ಕಿಡಿ

ನವಲಗುಂದ: ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಸಮನ್ಸ್ ನೀಡಿದ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಪರಿಶೀಲಿಸಿ, ರೈತರ ರಕ್ಷಣೆ ಧಾವಿಸಬೇಕು ಎಂದು ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಶಿದ್ದಪ್ಪ ಮುಪೈನವರ ಆಗ್ರಹಿಸಿದ್ದಾರೆ.

ಕುಡಿಯುವ ನೀರಿಗಾಗಿ ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟದಲ್ಲಿ ಪಾಲ್ಗೊಂಡ ರೈತರ ಮೇಲೆ ಪೊಲೀಸ್ ಇಲಾಖೆ ಹಾಕಿದ್ದ ಪ್ರಕರಣಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿಯೇ ಹಿಂಪಡೆಯಲಾಗಿದೆ. ಆದರೆ, ಕೆಲವು ಹೋರಾಟಗಾರರಿಗೆ ನವಲಗುಂದದ ಹಿರಿಯ ದಿವಾಣಿ ನ್ಯಾಯಾಲಯದಿಂದ ಸಮನ್ಸ್ ಬಂದಿದ್ದು, ಡಿ.7ರಂದು ತಪ್ಪದೇ ಹಾಜರಾಗುವಂತೆ ತಿಳಿಸಲಾಗಿದೆ.

ರೈತರಿಗೆ ಅನ್ಯಾಯವಾಗಬಾರದು. ಹಿಂದಿನ ಸರ್ಕಾರ ಹಿಂಪಡೆದ ಪ್ರಕರಣಗಳು ಮತ್ತೆ ಮರುಕಳಿಸದಂತೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ' ಎಂದು ಶಿದ್ದಪ್ಪ ಮುಪೈನವರ ಎಚ್ಚರಿಕೆ ನೀಡಿದ್ದಾರೆ.