ಪಾಟೀದಾರ್ ನಾಯಕ,ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ಬಂಧನಕ್ಕೆ ವಾರಂಟ್

ಗುಜರಾತ್: ಬಿಜೆಪಿ ಶಾಸಕ, ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ವಿರುದ್ದ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.
2017ರ ಗುಜರಾತ್ ವಿಧಾರಸಭೇಗೂ ಮೊದಲು ಸಮಾವೇಶವೊಂದರಲ್ಲಿ ಸರ್ಕಾರದ ಆದೇಶದ ಹೊರತಾಗಿಯೂ ಭಾಷಣ ಮಾಡಿದ ಕಾರಣಕ್ಕೆ ಹಾರ್ದಿಕ್ ಮೇಲೆ ಪ್ರಕರಣ ದಾಖಲಾಗಿತ್ತು.
ಈ ಸಂಬಂಧದ ಪ್ರಕರಣದ ವಿಚಾರಣೆಗೆ ಹಾಜರಾಗದ ಹಾರ್ದಿಕ್ ಪಟೇಲ್ ವಿರುದ್ಧ ಇದೀಗ ಗುಜರಾತಿನ ಸುರೇಂದ್ರ ನಗರ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ. ಮುಂದಿನ ವಿಚಾರಣೆಗೆ ಹಾರ್ದಿಕ್ರನ್ನು ನ್ಯಾಯಾಲದ ಮುಂದೆ ಹಾಜರುಪಡಿಸುವಂತೆ ಧ್ರಾಂಗಧರಾ ಪೋಲಿಸ್ ಠಾಣೆಯ ಅಧಿಕಾರಿಗೆ ಕೋರ್ಟ್ ತಾಕೀತು ಮಾಡಿದೆ.
2017ರ ನವೆಂಬರ್ 26ರಂದು ಹರಿಪರ್ ಗ್ರಾಮದಲ್ಲಿ ಸಭೆ ಆಯೋಜಿಸಿದ್ದ ಹಾರ್ದಿಕ್ ಪಟೇಲ್ ಪತ್ತು ಕೌಶಿಕ್ ಪಟೇಲ್ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿದ್ದಾಗಿ 2018 ಜ.12ರಂದು ಪ್ರಕರಣ ದಾಖಲಾಗಿತ್ತು.
ಧುತಾರ್ಪರ್ ಗ್ರಾಮದಲ್ಲೂ 2017ರ ನವೆಂಬರ್ನಲ್ಲಿ ಸರ್ಕಾರದ ಷರತ್ತುಗಳನ್ನು ಉಲ್ಲಂಘಿಸಿ ಭಾಷಣ ಮಾಡಿದ್ದರು ಎಂದು ಆರೋಪಿಸಿ ಹಾರ್ದಿಕ್ ಮೇಲೆ ಪ್ರಕರಣ ದಾಖಲಾಗಿ, ಕಳೆದ ವಾರವಷ್ಟೇ ಖುಲಾಸೆಯಾಗಿದ್ದರು.
2017ರ ವೇಳೆ ಹಾರ್ದಿಕ್ ಪಾಟೀದಾರ್ ಅನಾಮತ್ ಆಂದೋಲನ ಸಮಿತಿಯ ನಾಯಕರಾಗಿದ್ದರು. ಈ ಸಮಿತಿ ಪಾಟೀದಾರ್ ಸಮುದಾಯಕ್ಕೆ ಒಬಿಸಿ ಮೀಸಲಾತಿಗಾಗಿ ರಾಜ್ಯದೆಲ್ಲೆಡೆ ಹೋರಾಟ ನಡೆಸಿತ್ತು. ಕೆಲವೆಡೆ ಈ ಹೋರಾಟ ಹಿಂಸಾರೂಪಕ್ಕೂ ತಿರುಗಿತ್ತು.
ಆ ಬಳಿಕ 2019ರಲ್ಲಿ ಕಾಂಗ್ರೆಸ್ ಸೇರಿದ್ದ ಹಾರ್ದಿಕ್ 2022 ರ ಗುಜರಾತ್ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಬಿಜೆಪಿಯಿಂದ ಅಹಮದಾಬಾದ್ನ ವಿರಾಮಗಾಮ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.