ಉತ್ತರ ಪ್ರದೇಶ: ಕೊಳಕು ಹೊದಿಕೆ ಬಳಕೆಯಿಂದ ಅಸ್ವಸ್ಥರಾದ ರೈಲು ಪ್ರಯಾಣಿಕರು, ಸ್ಥಳಕ್ಕೆ ವೈದ್ಯರ ತಂಡ ದೌಡು

ಉತ್ತರ ಪ್ರದೇಶ: ರೈಲಿನಲ್ಲಿ ನೀಡಿದ ಹೊದಿಕೆ ಕೊಳಕು ಮತ್ತು ಅದರಿಂದ ವಾಸನೆ ಬರುತ್ತಿದ್ದರಿಂದ ಪ್ರಯಾಣಿಕರ ಆರೋಗ್ಯವನ್ನು ಹದಗೆಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸೋಮವಾರ ವಾರಣಾಸಿಗೆ ಪ್ರಯಾಣಿಸುತ್ತಿದ್ದ 15008 ಕ್ರಿಶಕ್ ಎಕ್ಸ್ಪ್ರೆಸ್ನ AC ಕೋಚ್ B-5 ನಲ್ಲಿದ್ದ ಪ್ರಯಾಣಿಕರಿಗೆ ಕೊಟ್ಟ ಹೊದಿಕೆಗಳಿಂದ ಬರುತ್ತಿದ್ದ ದುರ್ವಾಸನೆ ಬಗ್ಗೆ ದೂರಿದ್ದರು.
ಈ ವಿಷಯ ತಿಳಿದ ಅಧಿಕಾರಿಗಳು ತರಾತುರಿಯಲ್ಲಿ ರೈಲನ್ನು ನಿಲ್ದಾಣದಲ್ಲಿ ನಿಲ್ಲಿಸಿ ಬಾದಶಹನಗರ ರೈಲ್ವೆ ಆಸ್ಪತ್ರೆಯ ವೈದ್ಯರ ತಂಡವನ್ನು ಕರೆಸಲಾಯಿತು. ಸ್ಥಳಕ್ಕೆ ಆಗಮಿಸಿದ ತಂಡ ಮೂವರು ಪ್ರಯಾಣಿಕರನ್ನು ತಪಾಸಣೆ ನಡೆಸಿತು. ಹೊದಿಕೆಯ ವಾಸನೆಯಿಂದಾಗಿ ವಾಕರಿಕೆ ಬರಲಾರಂಭಿಸಿತು ಎಂದು ಪ್ರಯಾಣಿಕರು ವೈದ್ಯರ ತಂಡಕ್ಕೆ ಮಾಹಿತಿ ನೀಡಿದರು. ಪ್ರಯಾಣಿಕರಿಗೆ ಅಗತ್ಯ ಔಷಧೋಪಚಾರ ನೀಡಿದ ಬಳಿಕ ಪ್ರಯಾಣಿಕರು ಚೇತರಿಸಿಕೊಂಡಿದ್ದರಿಂದ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು.
ಈ ಘಟನೆಯು ರೈಲುಗಳಲ್ಲಿ ಹೊದಿಕೆ ಪೂರೈಕೆಯ ಸ್ವಚ್ಛತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏತನ್ಮಧ್ಯೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೊಬ್ಬರು ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ರೈಲ್ವೆ ಇದುವರೆಗೆ ಯಾವುದೇ ಕ್ರಮವನ್ನು ದೃಢಪಡಿಸಿಲ್ಲ.