ವಲಸೆ ಕಾರ್ಮಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ `ಶ್ರಮಿಕ್ ನಿವಾಸ್' ಯೋಜನೆ ಜಾರಿ

ವಲಸೆ ಕಾರ್ಮಿಕರಿಗೆ ಗುಡ್ ನ್ಯೂಸ್ : ಶೀಘ್ರವೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ `ಶ್ರಮಿಕ್ ನಿವಾಸ್' ಯೋಜನೆ ಜಾರಿ

ಬೆಂಗಳೂರು : ಇತರೆ ಜಿಲ್ಲೆ, ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ವಸತಿ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ 'ಶ್ರಮಿಕ್ ನಿವಾಸ್' ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯಿಂದಾಗಿ ಶ್ರಮಿಕ ವರ್ಗವೂ ಸಹ ಗೌರವದ ಬದುಕು ಕಂಡುಕೊಳ್ಳಲು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಪ್ರತಿಪಾದಿಸಿದರು.

ದೊಡ್ಡಬಳ್ಳಾಪುರದ ಓಬದೇನಹಳ್ಳಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮಹತ್ವಾಕಾಂಕ್ಷೆಯ 'ಶ್ರಮಿಕ್ ನಿವಾಸ್' ಯೋಜನೆಯಡಿ ನಿರ್ಮಿಸಲಾಗಿರುವ ಬೃಹತ್ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ದೇಶದಲ್ಲೇ ಮೊಟ್ಟ ಮೊದಲು ಎನ್ನಬಹುದಾದ ಶ್ರಮಿಕ್ ನಿವಾಸ್ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದ ಸಚಿವರು, ಈ ಯೋಜನೆ ಜಾರಿಯಿಂದ ರಾಜ್ಯ ಮತ್ತು ದೇಶದ ಘನತೆ ಹೆಚ್ಚಲಿದೆ ಅಂತೆಯೇ ವಲಸೆ ಕಾರ್ಮಿಕರಲ್ಲೂ ಭರವಸೆ ಮೂಡಲಿದ್ದು, ಇದರಿಂದ ಆ ವರ್ಗವೂ ಸಹ ಗೌರವದ ಬದುಕು ಕಾಣಲು ಸಾಧ್ಯವಾಗಲಿದೆ ಎಂದರು.

'ದೇಶವನ್ನು ರಕ್ಷಿಸುವ ಸೈನಿಕರು, ಹಸಿವು ನೀಗಿಸುವ ರೈತರು ಮತ್ತು ದೇಶ ಕಟ್ಟುವುದರಲ್ಲಿ ಮಹತ್ವದ ಪಾತ್ರವಹಿಸಿರುವ ಶ್ರಮಿಕ ವರ್ಗ ಸುಖಃ ನೆಮ್ಮದಿ ಶಾಂತಿಯಿಂದ ಇದ್ದರೆ ದೇಶದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಹೀಗಾಗಿ ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ' ಎಂದರು.

2006ರಲ್ಲಿ ಜಾರಿಗೆ ಬಂದಿರುವ ಕಾನೂನಿನಂತೆ ರಸ್ತೆ, ಮನೆ, ಬೃಹತ್ ವಸತಿ ಗೃಹ ಸೇರಿದಂತೆ ಯಾವುದೇ ನಿರ್ಮಾಣ ಆಗಬೇಕಿದ್ದರೆ ನಿರ್ಮಾಣಕ್ಕೂ ಮುನ್ನ ಶೇ.1ರಷ್ಟನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪಾವತಿಸಬೇಕು. ತಪ್ಪಿದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶ ಇರುತ್ತದೆ ಎಂದ ಸಚಿವ ಹೆಬ್ಬಾರ್, ಈ ಹಣದಲ್ಲಿ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಹಲವಾರು ಯೋಜನೆಗಳ ಮೂಲಕ ಸವಲತ್ತುಗಳನ್ನು ನೀಡುತ್ತಿದೆ ಎಂದರು.

ಕೈಗಾರಿಕಾ ಪ್ರದೇಶಗಳು ಸೇರಿದಂತೆ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ 'ಶ್ರಮಿಕ್ ನಿವಾಸ್' ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು, 138.71 ಕೋಟಿ ವೆಚ್ಚದಲ್ಲಿ ಶಿವಮೊಗ್ಗ, ಕಲ್ಬುರ್ಗಿ, ದಾವಣಗೆರೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಯೋಜನೆಯು ಪ್ರಗತಿಯ ಹಂತದಲ್ಲಿವೆ. ಅದರಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಓಬದೇವನಹಳ್ಳಿಯಲ್ಲಿ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಸತಿ ಸಮುಚ್ಛಯ ಯೋಜನೆಯಲ್ಲಿ 10 ಕೋಟಿ ವೆಚ್ಛದಲ್ಲಿ ನಿರ್ಮಿಸಲಾದ ಮೊದಲ ಹಂತದ ಸಮುಚ್ಚಯ ಕಾಮಗಾರಿಯು ಪೂರ್ಣಗೊಂಡಿದ್ದು ಲೋಕಾರ್ಪಣೆಗೊಳಿಸಲಾಗಿದೆ ಮತ್ತು ಉಳಿಕೆ 30 ಕೋಟಿ ವೆಚ್ಛದ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸಚಿವ ಹೆಬ್ಬಾರ್ ಮಾಹಿತಿ ನೀಡಿದರು.

ಶ್ರಮಿಕ್ ನಿವಾಸ್ ಯೋಜನೆಯಡಿ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯಗಳು ನಿರ್ಮಾಣವಾಗುತ್ತಿದೆ. ಏಕ ವಸತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದ್ದು, ಏಕ ಹಾಸಿಗೆ ವ್ಯವಸ್ಥೆ ಮತ್ತು ದ್ವಿ-ಹಾಸಿಗೆ ವ್ಯವಸ್ಥೆ ಲಭಿಸಲಿದೆ. ಕುಟುಂಬದೊಂದಿಗೆ ಉಳಿದುಕೊಳ್ಳ ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಮೂಲ ಸೌಕರ್ಯಕ್ಕೂ ಆದ್ಯತೆ

'ಶ್ರಮಿಕ್ ನಿವಾಸ್' ಯೋಜನೆಯಡಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದ್ದು, ಈ ವಸತಿ ಸಮುಚ್ಚಯಗಳನ್ನು ಇಲಾಖೆಯೇ ನಿರ್ವಹಿಸಲಿದ್ದು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರಿಗೆ ಈ ವಸತಿ ಸೌಲಭ್ಯ ದೊರಕಲಿದೆ ಎಂದು ಹೆಬ್ಬಾರ್ ತಿಳಿಸಿದರು.

ಎಲ್ಲ ಜಿಲ್ಲೆಗಳಿಗೆ ಯೋಜನೆ ವಿಸ್ತರಣೆ

ಮುಂದಿನ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 'ಶ್ರಮಿಕ್ ನಿವಾಸ್' ಯೋಜನೆಯನ್ನು ಜಾರಿ ಮಾಡಲು ಯೋಜನೆ ರೂಪಿಸಲಾಗಿದ್ದು, ರಾಜ್ಯದ ವಿವಿಧೆಡೆ ಜಾಗಗಳನ್ನು ಗುರುತಿಸಿ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ರಾಜ್ಯ ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಶ್ರಮಿಕ ವರ್ಗದ ಅದರಲ್ಲೂ ವಲಸೆ ಕಾರ್ಮಿಕರ ಬಹು ದಿನಗಳ ವಸತಿ ಸಮಸ್ಯೆ ನಿವಾರಣೆ ಆಗಲಿದೆ. ರಾಜ್ಯದ ಎಲ್ಲಾ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಒದಗಿಸಬೇಕೆಂಬುದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರ ಆಶಯ ಹಾಗೂ ರಾಜ್ಯ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಗುರಿಯಾಗಿದೆ ಎಂದು ಮಂಡಳಿ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ನುಡಿದರು.