ಸಿದ್ದರಾಮಯ್ಯನವರದ್ದು ಮತಬ್ಯಾಂಕ್ ರಾಜಕಾರಣ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯನವರದ್ದು ಮತಬ್ಯಾಂಕ್ ರಾಜಕಾರಣ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಗ : ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಮತಬ್ಯಾಂಕಿನ ರಾಜಕಾರಣ ಹಾಗೂ ಓಲೈಕೆ ರಾಜಕಾರಣವನ್ನು ಕಳೆದ 20 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲಕ್ಕುಂಡಿ ಉತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಂದು ಬೇರೆ, ಹಿಂದುತ್ವ ಬೇರೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಹೊಸ ಹೊಸ ವ್ಯಾಖ್ಯಾನವನ್ನು ಸಿದ್ದರಾಮಯ್ಯನವರನ್ನೇ ಕೇಳಬೇಕು.

ಅವರದ್ದು ಯಾವಾಗಲು ದ್ವಿಮುಖ ನೀತಿ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿಯ ದ್ವಂದ್ವ ನೀತಿಯನ್ನು ಸಮಾಜದಲ್ಲಿ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮತದಾರರು ಬಹಳ ಪ್ರಬುದ್ಧರಾಗಿದ್ದು, ಇಂಥ ದ್ವಿಮುಖ ನೀತಿಗೆ ಮನ್ನಣೆ ನೀಡುವುದಿಲ್ಲ. ಹಿಂದೂ, ಹಿಂದುತ್ವ ವ್ಯತ್ಯಾಸ ಮಾಡುವುದು, ಇಸ್ಲಾಂ , ಮುಸಲ್ಮಾನರು ಒಂದು ಎನ್ನುವುದು ಮಾಡುತ್ತಾರೆ. ಸಮಾಜದಲ್ಲಿ ಬಿರುಕು ಹುಟ್ಟಿಸುವುದು, ಜಾತಿಗಳನ್ನು ಒಡೆಯುವುದು, ಉಪಜಾತಿಗಳ ದೊಡ್ಡ ಸಮೂಹವನ್ನೇ ಸೃಷ್ಟಿ ಮಾಡಲು ದೊಡ್ಡ ಸಮಿತಿಗಳನ್ನೇ ರಚಿಸಿರುವ ಸಾಕಷ್ಟು ಉದಾಹರಣೆಗಳಿವೆ. ಜನ ಅವರನ್ನು 2018ರಲ್ಲಿ ಮನೆಗೆ ಕಳುಹಿಸಿದ್ದರು. ಈ ಬಾರಿಯೂ ಕಳುಹಿಸಲಿದ್ದಾರೆ ಎಂದರು.

ಪೊಳ್ಳು ಘೋಷಣೆ

ರಾಜ್ಯಪಾಲರ ಭಾಷಣ ಶುದ್ಧ ಸುಳ್ಳು ಎಂಬ ಸಿದ್ಧರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ಚುನಾವಣೆಗೆ ಹೋಗುವ 2 ತಿಂಗಳ ಮುಂಚೆ, ಬಜೆಟ್ 15 ಲಕ್ಷ ಮನೆಗಳನ್ನು ಘೋಷಣೆ ಮಾಡಿ 3 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದಿದ್ದರು. ಆದರೆ 15 ಸಾವಿರ ಕೋಟಿ ರೂ. ಇಡಬೇಕಾಗಿತ್ತು. ಅವರೇ ಸುಳ್ಳು ಹೇಳಿ, ಮೋಸ ಮಾಡಿದ್ದಾರೆ. 15 ಲಕ್ಷ ಮನೆ ನಿರ್ಮಾಣಕ್ಕೆ ಮೂರನೇ ಒಂದು ಭಾಗದಷ್ಟು ಅನುದಾನ ಮೀಸಲಿಡದೇ , ಪೊಳ್ಳು ಘೋಷಣೆ ಬಜೆಟ್ ಮಾಡಿದ ಧೀಮಂತ ನಾಯಕ. ಆ ಮನೆಗಳನ್ನು ಕಟ್ಟುವ ಜವಾಬ್ದಾರಿ ನಮ್ಮ ಪಾಲಿಗೆ ಬಂದಿದ್ದು, ಅದರೊಂದಿಗೆ ಹೊಸ 5 ಲಕ್ಷ ಮನೆಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆ. ಇವೆಲ್ಲವೂ ಅವರಿಗೆ ತಿಳಿದಿದ್ದರೂ, ರಾಜಕೀಯ ಕಾರಣಕ್ಕಾಗಿ ಇಂತಹ ಅಪಾದನೆಗಳನ್ನು ಮಾಡುತ್ತಿದ್ದಾರೆ ಎಂದರು.

ನವಲಿ ಡ್ಯಾಂ ಡಿಪಿಆರ್ ಸಿದ್ಧವಾಗಿದೆ

ತುಂಗಭದ್ರಾ ನದಿಗೆ ಪರ್ಯಾಯವಾಗಿ ನವಲೆ ಡ್ಯಾಂ ಕಟ್ಟುವ ಪ್ರಸ್ತಾವನೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಯೋಜನೆಯ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ.ಆಂಧ್ರದ ಅಧಿಕಾರಿಗಳು ಈ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಆಗಮಿಸಿದ್ದು, ಒಂದು ಸುತ್ತಿನ ಚರ್ಚೆಯನ್ನು ಮಾಡಲಾಗಿದೆ. ಕೆಲವು ವಿಚಾರಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಕೇಳಲಾಗಿದೆ. ಒಂದು ಹಂತದ ಸಿದ್ಧತೆಗಳ ನಂತರ ರಾಜಕೀಯವಾಗಿ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಸ್ಪರ ಒಂದು ಇತ್ಯರ್ಥಕ್ಕೆ ಬರಲಾಗುವುದು ಎಂದರು.