ಮಲೆನಾಡಲ್ಲಿ ನಿಲ್ಲದ ಹುಲಿ ದಾಳಿ: ಆರು ತಿಂಗಳಲ್ಲಿ 50ಕ್ಕೂ ಹೆಚ್ಚು ಹಸುಗಳು ಬಲಿ

ಮಲೆನಾಡಲ್ಲಿ ನಿಲ್ಲದ ಹುಲಿ ದಾಳಿ: ಆರು ತಿಂಗಳಲ್ಲಿ 50ಕ್ಕೂ ಹೆಚ್ಚು ಹಸುಗಳು ಬಲಿ

ಚಿಕ್ಕಮಗಳೂರು, ಫೆಬ್ರವರಿ 13: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಹುಲಿ ಹಾವಳಿ ಮುಂದುವರೆದಿದ್ದು, ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ಹುಲಿ ದಾಳಿ ನಿರಂತರವಾಗಿದ್ದು, ಜಾನುವಾರು ಗಳನ್ನು ಸಾಕಿಕೊಂಡು ಬದುಕು ಸಾಗಿಸುತ್ತಿದ್ದ ರೈತ ಕುಟುಂಬ ಆತಂಕಕ್ಕೀಡಾಗಿದೆ.

ಮೇವಿಗೆ ಹೋದ ಹಸುಗಳು ಮನೆಗೆ ವಾಪಸ್‌ ಬರುವವರೆಗೂ ರೈತರು ಆತಂಕದಲ್ಲೇ ಸಮಯ ಕಳೆಯುವ ಪರಿಸ್ಥಿತಿ ಮಲೆನಾಡಲ್ಲಿ ನಿರ್ಮಾಣವಾಗಿದೆ. ಕಾಡಾನೆ, ಕಾಡುಕೋಣ ದಾಳಿಯಿಂದ ಹೈರಣಾದ ಜನರು ಕಳೆದ ಆರು ತಿಂಗಳಿಂದ ಹುಲಿ ದಾಳಿಯ ಆತಂಕದಲ್ಲಿದ್ದಾರೆ. ಹುಲಿ ದಾಳಿಯಿಂದ ಈವರೆಗೂ ಸರಿಸುಮಾರು 50ಕ್ಕೂ ಹೆಚ್ಚು ರಾಸುಗಳು ಹುಲಿ ದಾಳಿಯಿಂದ ಸಾವನ್ನಪ್ಪಿವೆ.

ಸೋಮವಾರ ಕೂಡ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದಲ್ಲಿ ಹುಲಿ ದಾಳಿಗೆ ಸಿಂದಿ ಹಸುವೊಂದು ಬಲಿಯಾಗಿದೆ. ಮತ್ತಿಕಟ್ಟೆಯ ಬ್ಲೂ ಮೌಂಟ್ ಎಸ್ಟೇಟ್ ಆನಂದ್ ಮಿಸ್ಕಿತ್ ಅವರ ಕಾಫಿ ತೋಟದಲ್ಲಿ ಮಧುಸೂದನ್ ಎನ್ನುವವರ ಮನೆಯ ಸಿಂದಿ ಹಸು ಹುಲಿ ಬಾಯಿಗೆ ತುತ್ತಾಗಿದೆ. ಬಣಕಲ್ ಸುತ್ತಮುತ್ತಲಿನ ಹೆಗ್ಗುಡ್ಲು, ಮತ್ತಿಕಟ್ಟೆ, ಬಿ.ಹೊಸಳ್ಳಿ, ಹೊಕ್ಕಳ್ಳಿ, ಭಾರತೀಬೈಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಹುಲಿ ದಾಳಿ ನಿರಂತರವಾಗಿವೆ. ಆದರೆ ಅರಣ್ಯ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಹಲವು ಬಾರಿ ಹುಲಿಯನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹುಲಿ ಸೆರೆಗೆ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಿದ್ದರೂ ಹುಲಿಯನ್ನು ಸ್ಥಳಾಂತರ ಮಾಡಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ. ಹುಲಿ ದಾಳಿಯಿಂದ ನಿರಂತರವಾಗಿ ರಾಸುಗಳನ್ನ ಕಳೆದುಕೊಳ್ಳುತ್ತಿರುವ ರೈತರು ಕೂಡಲೇ ಹುಲಿಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹುಲಿ ಸ್ಥಳಾಂತರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಬಂದ ಕೂಡಲೇ ಹುಲಿಯನ್ನ ಸ್ಥಳಾಂತರಿಸುತ್ತೇವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ಗಸ್ತು ಅಧಿಕಾರಿ ಜಯಪ್ಪ, ಮೋಸಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.