ಕೇಂದ್ರ ಸರ್ಕಾರದಿಂದ ಸೇನೆ ಬಲಪಡಿಸುವ ಹಾಗೂ ದೇಶದಲ್ಲಿ ಐಕ್ಯತೆ ತರುವ ಕೆಲಸವಾಗಿದೆ - ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು : ಗಣರಾಜ್ಯದ ಪರಿಕಲ್ಪನೆಗೆ ಪೂರಕವಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಭಾರತೀಯ ಸೇನೆಯನ್ನು ಬಲಪಡಿಸುವ ಹಾಗೂ ದೇಶದಲ್ಲಿ ಐಕ್ಯತೆ ತರುವ ಕೆಲಸವನ್ನು ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
74 ನೇ ಗಣರಾಜ್ಯೋತ್ಸವ ಪ್ರಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗಡಿ ಕಾಯುವ ಯೋಧರ ಜೊತೆ ದೀಪಾವಳಿ ಆಚರಿಸಿದ ಏಕೈಕ ಪ್ರಧಾನಿ ನರೇಂದ್ರ ಮೋದಿಯವರು. ಹಾಗೆಯೇ ಅವರು ಸೇನೆಯನ್ನು ಬಲಪಡಿಸಲು ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಎಂಬ ಹುದ್ದೆ ಆರಂಭಿಸಲಾಗಿದೆ. ರಕ್ಷಣಾ ಉದ್ಯಮವನ್ನು ಉತ್ತಮವಾಗಿ ಬೆಳೆಸಲಾಗಿದೆ. ಈ ಕ್ಷೇತ್ರದ ಉತ್ಪನ್ನಗಳ ರಫ್ತು ಶೇ.700 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವಾಗಿ ಆಚರಿಸುತ್ತಿದ್ದು, ಕರ್ತವ್ಯ ಪಥದ ಬಳಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಕರ್ನಾಟಕದವರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರು ಸೇನೆಯ ಮುಖ್ಯಸ್ಥ ಹುದ್ದೆ ಹೊಂದಿದ್ದರು. ಮೊದಲ ಬಾರಿಗೆ ಆರ್ಮಿ ಡೇ ಪೆರೇಡ್ನ್ನು ದೆಹಲಿಯಿಂದ ಹೊರಗೆ ಬೆಂಗಳೂರಿನಲ್ಲೇ ಆಚರಿಸಿ ಸೇನಾನಿಗಳಿಗೆ ಗೌರವ ಸಲ್ಲಿಸಲಾಗಿದೆ. ಹಾಗೆಯೇ ಅಂಡಮಾನ್ ನಿಕೋಬಾರ್ನ 21 ದ್ವೀಪಗಳಿಗೆ ಹುತಾತ್ಮ ಯೋಧರ ಹೆಸರನ್ನು ನಾಮಕರಣ ಮಾಡಲಾಗಿದೆ. ಜಮ್ಮು-ಕಾಶ್ಮೀರ ನಮ್ಮ ದೇಶದಲ್ಲೇ ಇದ್ದರೂ, ಅದು ಪ್ರತ್ಯೇಕವಾಗಿರುವಂತೆಯೇ ಇತ್ತು. ಅಲ್ಲಿ ಕೂಡ ವಿಶೇಷ ಸ್ಥಾನಮಾನ ರದ್ದು ಮಾಡಿ ಗಣರಾಜ್ಯ ಎಂಬುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.
ವಿವಿಧತೆಯಲ್ಲಿ ಏಕತೆ ಎಂಬುದು ಭಾರತದ ಧ್ಯೇಯವಾಗಿದೆ. ಇದನ್ನು ಒಳಗೊಂಡೇ ದೇಶ ಉತ್ತಮವಾಗಿ ಅಭಿವೃದ್ಧಿ ಸಾಧಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಶ್ರೇಷ್ಠ ಸಂವಿಧಾನ ಕಾರಣವಾಗಿದೆ. ಬ್ರಿಟಿಷರು ದೇಶ ತೊರೆಯುವಾಗ ಸಂವಿಧಾನ ರಚಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಇದಕ್ಕೊಪ್ಪದ ಮಹಾತ್ಮ ಗಾಂಧೀಜಿ, ನಮ್ಮ ಸಂವಿಧಾನವನ್ನು ನಾವೇ ರಚಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ನಮ್ಮ ಸಂವಿಧಾನ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ಬೇರೆ ದೇಶಗಳ ಒಳ್ಳೆಯ ಅಂಶಗಳನ್ನು ಕೂಡ ಎರವಲು ಪಡೆಯಲಾಗಿದೆ. ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಕೂಡ ಜನರು ಅರಿಯಬೇಕು ಎಂದು ಹೇಳಿದರು.
ಜಿ-20 ಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಬೆಂಗಳೂರಿನಲ್ಲೂ ಶೃಂಗಸಭೆ ನಡೆಯಲಿದೆ. ಇದು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಸಂದ ಅತಿ ದೊಡ್ಡ ಗೌರವವಾಗಿದೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 61 ಪದಕಗಳು ಭಾರತಕ್ಕೆ ಬಂದಿದ್ದು, ಯುವ ಕ್ರೀಡಾಪಟುಗಳಿಂದ ಜಾಗತಿಕ ಮಟ್ಟದಲ್ಲಿ ಭಾರತ ಧ್ವಜ ಎತ್ತರದಲ್ಲಿ ಹಾರಾಡಿದೆ ಎಂದರು.