ಹಾಸನ ರಾಜಕಾರಣ ರೇವಣ್ಣರಿಗೇ ಬಿಟ್ಟಿದ್ದೇನೆ: ಎಚ್.ಡಿ.ಕೆ

ಬೆಂಗಳೂರು: ಹಾಸನ ಜಿಲ್ಲೆಯ ರಾಜಕಾರಣವನ್ನು ರೇವಣ್ಣ ಅವರಿಗೇ ಬಿಟ್ಟಿದ್ದೇನೆ. ಪಕ್ಷಕ್ಕೆ ದುಡಿದವರನ್ನು ಎಂದೂ ಕೈಬಿಟ್ಟಿಲ್ಲ. ತಾಳ್ಮೆ ಎನ್ನುವುದು ಇಲ್ಲಿ ಮುಖ್ಯ ಎಂದು ಜೆಡಿಎಸ್ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್ ಪ್ರಮುಖ ಸಿ.ಎಂ. ಧನಂಜಯ ಹಾಗೂ ಕೊಳ್ಳೇಗಾಲ ಕ್ಷೇತ್ರ ನಿವೃತ್ತ ಸರ್ಕಲ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.
'ಕಡೂರು ಕ್ಷೇತ್ರದಲ್ಲಿ ಪಕ್ಷಕ್ಕೆ ದುಡಿದಿದ್ದ ಧರ್ಮೇಗೌಡರ ಬದಲು ವೈ.ಎಸ್.ವಿ. ದತ್ತ ಅವರಿಗೆ ಟಿಕೆಟ್ ಕೊಟ್ಟೆವು. ದೇವೇಗೌಡರ ಮಾನಸಪುತ್ರ ಎಂದು ಹೇಳಿಕೊಂಡು ಅವರು ಓಡಾಡಿದರು. ದತ್ತ ಅವರು ವಿಧಾನ ಸಭೆಯಲ್ಲಿ ನಿನಗೆ ನೆರವಾಗುತ್ತಾರೆ ಎಂದು ದೇವೇಗೌಡರು ಹೇಳಿದ್ದರು. ಆದರೆ, ದತ್ತ ನೆರವೂ ಆಗಲಿಲ್ಲ; ಪಕ್ಷಕ್ಕೆ ದ್ರೋಹ ಮಾಡಿ ಹೋದರು' ಎಂದರು.
ಪಾಪದ ಹಣದಲ್ಲಿ ಲುಲು ಮಾಲ್: 'ಪಾಪದ ಹಣದಲ್ಲಿ ಲುಲು ಮಾಲ್ ಕಟ್ಟಿದ್ದಾರೆ. ಅದರಿಂದ ಬಂದ ಹಣವನ್ನು ಜನರಿಗೆ ನೀಡುತ್ತಿಲ್ಲ' ಎಂದು ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಕುರಿತು ಟೀಕಿಸಿದರು. ಜೆಡಿಎಸ್ ಕಾರ್ಯಕ್ರಮಗಳನ್ನು ವ್ಯಂಗ್ಯವಾಡಿದ್ದ ಶಿವಕುಮಾರ್ ಅವರ ಹೆಸರು ಹೇಳದೇ, ಪರೋಕ್ಷವಾಗಿ ಟೀಕಿಸಿದ ಅವರು, 'ನಾನು ಲುಲು ಮಾಲ್ ಕಟ್ಟಿದ್ದಿದ್ದರೆ ಪಂಚರತ್ನ ಯೋಜನೆ ರೂಪಿಸುವ ಬದಲು, ಅದರಿಂದ ಬಂದ ಹಣವನ್ನು ಹಂಚಿ ಚುನಾವಣೆ ಗೆಲ್ಲುತ್ತಿದ್ದೆ' ಎಂದರು.
ಬಿಜೆಪಿಯ ಒಬ್ಬೊಬ್ಬ ಶಾಸಕರು ₹40 ಕೋಟಿ-₹50 ಕೋಟಿ ಇಟ್ಟುಕೊಂಡಿದ್ದಾರೆ. ಜನರ ಹಣವನ್ನು ಲೂಟಿ ಮಾಡಿ, ಈ ಅಕ್ರಮ ಹಣದಲ್ಲಿ ಚುನಾವಣೆ ಗೆಲ್ಲುವುದಾಗಿ ಹೇಳುತ್ತಿದ್ದಾರೆ ಎಂದರು.
ದೇವೇಗೌಡರ ರೋಡ್ ಶೋ
ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಕುಂಬಳಗೋಡಿನಿಂದ ಮೈಸೂರಿನವರೆಗೆ ಬೃಹತ್ ರೋಡ್
ಶೋ ನಡೆಸಲಾಗುವುದು. ಮಾಜಿ ಪ್ರಧಾನಿ ದೇವೇಗೌಡರನ್ನು ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಸಮಾವೇಶದಲ್ಲಿ 10 ಲಕ್ಷ ಜನ ಸೇರಲಿದ್ದಾರೆ ಎಂದರು.