ಶಿವಮೊಗ್ಗ: ಪ್ರಾರ್ಥನಾ ಮಂದಿರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಶಿವಮೊಗ್ಗ: ಪ್ರಾರ್ಥನಾ ಮಂದಿರಕ್ಕೆ ಮಾರ್ಚ್ 19ರಂದು ಬಜರಂಗದಳ ಕಾರ್ಯಕರ್ತರು ಅಕ್ರಮ ಪ್ರವೇಶ ಮಾಡಿ ದಾಳಿ ನಡೆಸಿದ್ದಲ್ಲದೇ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಸೌತ್ ಇಂಡಿಯಾ ಕ್ರಿಶ್ಚಿಯನ್ ಮಿಷನ್ ಫಾಸ್ಟರ್ ಫಾ. ಮಣಿಕಂಠ ಇಮ್ಯಾನುಯಲ್ ಹಾಗೂ ಸಂಸ್ಥೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು
'ಒಂದೂವರೆ ತಿಂಗಳ ಹಿಂದೆ ಭಾನುವಾರದ ಆರಾಧನೆಯ ಸಂದರ್ಭದಲ್ಲಿ ಬಜರಂಗದಳದ ಕೆಲವು ಕಾರ್ಯಕರ್ತರು ಬಂದು ನೀವು ಮತಾಂತರ ಮಾಡುತ್ತಿದ್ದೀರಿ. ಇನ್ನು ಮುಂದೆ ಇಲ್ಲಿ ಪ್ರಾರ್ಥನೆ ಮಾಡಬಾರದು ಎಂದು ಸುಳ್ಳು ಆರೋಪ ಹೊರಿಸಿ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ತುಂಗಾನಗರ ಠಾಣೆಗೆ ಹೋಗಿ ಮೌಖಿಕ ದೂರು ನೀಡಿದ್ದೇನೆ' ಎಂದು ಫಾಸ್ಟರ್ ಹೇಳಿದರು.
'ಮಾರ್ಚ್ 19ರಂದು ಪ್ರಾರ್ಥನಾ ಮಂದಿರದಲ್ಲಿ ಆರಾಧನೆ ಪ್ರಾರಂಭಿಸಿದಾಗ ಏಕಾಏಕಿ ಬಜರಂಗದಳದ ಕಾರ್ಯಕರ್ತರಾದ ಅಂಕುಶ್, ಸಚಿನ್, ಜಿತೇಂದ್ರ ಗೌಡ, ರಾಜೇಶ್ ಗೌಡ ಇನ್ನಿತರರು ತುಂಗಾ ನಗರ ಪೊಲೀಸರೊಂದಿಗೆ ಬಂದು ಘೋಷಣೆ ಕೂಗಿ ಪ್ರಾರ್ಥನೆಗೆ ಅಡ್ಡಪಡಿಸಿದ್ದಾರೆ. ಅಲ್ಲಿದ್ದವರನ್ನು ಕೂಡ ಪೊಲೀಸರು ವಿಚಾರಿಸಿದಾಗ ನಮಗೆ ಯಾರೂ ಕೂಡ ಬಲವಂತ ಮಾಡಿಲ್ಲ ಎಂದು ತಿಳಿಸಿದ್ದಾರೆ' ಎಂದರು.
ಪದೇ ಪದೇ ದಾಳಿ ಮಾಡಿ ಪ್ರಾರ್ಥನಾ ಮಂದಿರದ ಕೆಲಸಗಳಿಗೆ ಅಡ್ಡಿಪಡಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರಮುಖರಾದ ಏಸುದಾಸ್, ಜೆ.ವಿ. ಭಾನು, ಶಿವಕುಮಾರ್, ಎಸ್.ಎ. ಯೂಸುಫ್, ಸಿ.ರಾಜೇಂದ್ರನ್, ಡಿಎಸ್ಎಸ್ ಸದಸ್ಯರು ಇದ್ದರು