ರಾಜ್ಯ ಬಿಜೆಪಿ ಸರ್ಕಾರದ ಬಹುಕೋಟಿ ಹಗರಣ ಬಿಚ್ಚಿಟ್ಟ ಮಾಜಿ MLC ರಮೇಶ್ ಬಾಬು

ರಾಜ್ಯ ಬಿಜೆಪಿ ಸರ್ಕಾರದ ಬಹುಕೋಟಿ ಹಗರಣ ಬಿಚ್ಚಿಟ್ಟ ಮಾಜಿ MLC ರಮೇಶ್ ಬಾಬು

ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದವಿವಿಧ ಕೋಟಿ ಕೋಟಿ ಹಗರಣಗಳನ್ನು ಮಾಜಿ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬುಅವರು ಇಂದು ಬಹಿರಂಗ ಪಡಿಸಿದ್ದಾರೆ.

ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯ 850 ಕೋಟಿಯ ಹಗರಣವನ್ನು ದಾಖಲೆ ಸಮೇತ ಬಹಿರಂಗಪಡಿಸಲಾಗಿದ್ದು, ಬೇನಾಮಿ ವರ್ಗಾವಣೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಾನೂನು ತಂದಿದ್ದು. ಹರಿಹಂತ್ ಬ್ಯಾಂಕ್ ಮೂಲಕ ಸಾರ್ವಜನಿಕ ಹಣ ಲಪಟಾಯಿಸುವ ಪ್ರಯತ್ನದ ವಿರುದ್ಧ ತನಿಖೆ ಆಗಿ ಇದರಲ್ಲಿ ಭಾಗವಾಗಿರುವವರ ವಿರುದ್ಧ ಅಗತ್ಯ ಕ್ರಮ ವಹಿಸಬೇಕು ಎಂದರು.

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ 250 ಎಕರೆ ಜಾಗವನ್ನು ಇಶಾ ಫೌಂಡೇಶನ್ ಗೆ ನೀಡುವುದರ ಜತೆಗೆ ಸುಮಾರು 100 ಕೋಟಿ ಹಣವನ್ನು ಮಣ್ಣಿನ ಸಂರಕ್ಷಣೆ ಅಭಿಯಾನ ಹೆಸರಲ್ಲಿ ಜಗ್ಗಿ ವಾಸುದೇವ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರ್ಕಾರ ನೀಡಿದೆ. ಇದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾದರಿಯ ಮತ್ತೊಂದು ರೀತಿಯ ಹಗರಣವಾಗಿದೆ ಎಂದು ಗುಡುಗಿದರು.

ಈ ದೇಶದಲ್ಲಿ ಸ್ವಯಂ ಘೋಷಿತ ದೇವಮಾನವರು ಸರ್ಕಾರ ಅಲ್ಲಾಡಿಸುವ ಕೆಲಸ ಮಾಡುತ್ತಿದ್ದು, ನಮ್ಮ ರಾಜ್ಯದಲ್ಲಿ ಬಿಡದಿಯ ಬಳಿಯ ನಿತ್ಯಾನಂದ ಅವರ ಹಗರಣವನ್ನು ದೇಶವೇ ನೋಡಿದೆ. ಜಗ್ಗಿ ವಾಸುದೇವ್ ಅವರು ಸ್ವಯಂಘೋಷಿತ ದೇವಮಾನವರಾಗಿದ್ದು, ಇವರ ವಿರುದ್ಧ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳಲ್ಲಿ ಭೂ ಹಗರಣ, ಕಾವೇರಿ ಕಾಲಿಂಗ್ ಹೆಸರಿನಲ್ಲಿ ನಡೆದ ಹಗರಣಗಳು ವಿಚಾರಣೆ ನಡೆಯುತ್ತಿವೆ. ಇನ್ನು ಇವರು ಹಲವಾರು ಕೋಟಿ ತೆರಿಗೆ ವಂಚನೆ ಆರೋಪವಿದೆ ಎಂದು ಹೇಳಿದರು

ರಾಜ್ಯದಲ್ಲಿ ಕೃಷಿ ಇಲಾಖೆ, ಕೃಷಿ ತಜ್ಞರಿದ್ದು ಇವರೆಲ್ಲರನ್ನು ಬಿಟ್ಟು ಮಣ್ಣು ಸಂರಕ್ಷಣೆ ಹೆಸರಲ್ಲಿ ರಾಜ್ಯ ಸರ್ಕಾರ ಸ್ವಾಮೀಜಿಗೆ ಶರಣಾಗುತ್ತದೆ ಎಂದರೆ ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ. ಬೊಮ್ಮಾಯಿ ಅವರು ತಮ್ಮ ತಪ್ಪು ತಿದ್ದುಕೊಳ್ಳಬೇಕು ಎಂದು ಎಚ್ಚರಿಸಿದರು.

ಆಶ್ಚರ್ಯಕರ ವಿಚಾರ ಎಂದರೆ ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರಿಗೆ ಪತ್ರ ಬರೆದು ದೇಣಿಗೆ ನೀಡುವಂತೆ ಕೇಳುತ್ತಾರೆ. ಆ ಪತ್ರಕ್ಕೆ ಪೂರಕವಾಗಿ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ 100 ಕೋಟಿ ನೀಡುವುದಾಗಿ ತಿಳಿಸುತ್ತಾರೆ. ನೀವು ಪುಣ್ಯಕೋಟಿ ಯೋಜನೆ ಹೆಸರಲ್ಲಿ 100 ಕೋಟಿಯನ್ನು ಸರ್ಕಾರಿ ನೌಕರರಿಂದ ಸಂಗ್ರಹಿಸುತ್ತೀರಿ, ಮತ್ತೊಂದೆಡೆ ಸ್ವಯಂ ಘೋಷಿತ ಸ್ವಾಮೀಜಿಗೆ 100 ಕೋಟಿ ಹಣ ನೀಡುತ್ತೀರಿ. ಇಂದು ಕರ್ನಾಟಕ ಹೈಕೋರ್ಟ್ ಕೂಡ ಗೋಶಾಲೆ ವಿಚಾರವಾಗಿ ಸರ್ಕಾರವನ್ನು ಪ್ರಶ್ನಿಸಿದೆ. ಸರ್ಕಾರ ಗೋಶಾಲೆ ಹೆಸರಲ್ಲಿ ವಸೂಲಿಗೆ ಮುಂದಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ. ಕೋವಿಡ್ ಸಮಯದಲ್ಲಿ ಇವರಿಗೆ ನೀಡಬೇಕಾಗಿದ್ದ ತುಟ್ಟಿ ಭತ್ಯೆ 2-3 ಸಾವಿರ ಕೋಟಿ ನೀಡಿಲ್ಲ, ಶಾಲೆ ಕಾಲೇಜು ವಿಚಾರ ಬಗೆಹರಿಸಿಲ್ಲ. ಮಕ್ಕಳಿಗೆ ಸಮವಸ್ತ್ರ, ಶೂ ಸಾಕ್ಸ್ ನೀಡುತ್ತಿಲ್ಲ. ಅವರಿಗೆ ಅನುಕೂಲ ಮಾಡಲು ನಿಮ್ಮ ಬಳಿ ಹಣವಿಲ್ಲ. ಆದರೆ ಸ್ವಯಂಘೋಷಿತ ದೇವಮಾನವನಿಗೆ ಹಣ ನೀಡುತ್ತೀರಾ ಎಂದಾದರೆ ಈ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ. ನಿಮ್ಮ 40% ಕಮಿಷನ್ ಮುಚ್ಚಿಟ್ಟುಕೊಳ್ಳಲು ಇಂತಹ ದೇವಮಾನವರು ಬೇಕಾ? ಇವರು ಭ್ರಷ್ಟಾಚಾರ ಹಣ ರಕ್ಷಿಸಲು ಜಾಗ ಹುಡುಕಿಕೊಳ್ಳುತ್ತಿದ್ದಾರೆ. ಬೊಮ್ಮಾಯಿ ಅವರೇ ನಿಮಗೆ ಸಾರ್ವಜನಿಕರ ಹಣವನ್ನು ಸಂರಕ್ಷಿಸುವ ಜವಾಬ್ದಾರಿ ಇದೆ. ಜನರ ಹಣವನ್ನು ಸಿಕ್ಕಸಿಕ್ಕವರಿಗೆ ನೀಡಲು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿಲ್ಲ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹಗರಣವಾಗಲಿ ಅಥವಾ ಜಗ್ಗಿ ವಾಸುದೇವ ಅವರಿಗೆ ಹಣ ನೀಡುವ ಧಂದೆಯನ್ನು ತಡೆಯಬೇಕು. ವಿವಿ ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಸರ್ಕಾರದ ಹಣವಿಲ್ಲ. ಆದರೆ ಜಗ್ಗಿವಾಸುದೇವ ಅವರಿಗೆ 100 ಕೋಟಿ ಹಣ ನೀಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಕಾವೇರಿ ಕಾಲಿಂಗ್ ಅಭಿಯಾನ ವಿಚಾರವಾಗಿ ಜಗ್ಗಿ ವಾಸುದೇವ್ ಅವರ ವಿರುದ್ಧ ಹೈಕೋರ್ಟ್ ವಿಚಾರಣೆ ನಡೆಯುತ್ತಿದ್ದು, ಇತ್ಯರ್ಥವಾಗುವ ಮುನ್ನ ಮುಖ್ಯಮಂತ್ರಿಗಳು 250 ಎಕರೆ ಜಮೀನು 100 ಕೋಟಿ ಹಣ ನೀಡಿದ್ದಾರೆ. ಈ ಹಿಂದೆಯೂ ಜಗ್ಗಿ ವಾಸುದೇವ್ ಅವರು ತಮ್ಮ ಫೌಂಡೇಶನ್ ಗೆ ದೇಣಿಗೆ ನೀಡಬೇಕು ಎಂದು ಪತ್ರ ಬರೆದಿದ್ದರೂ ಈ ಹಿಂದಿನ ಸರ್ಕಾರಗಳು ಅದನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಇಶಾ ಫೌಂಡೇಶನ್ ಜೆತೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡಿ ಕೊಟ್ಟಿರುವ ಹಣ ಹಾಗೂ ಸರ್ಕಾರಿ ಜಮೀನು ಹಿಂಪಡೆಯಬೇಕು. ರಾಜ್ಯದ ತೆರಿಗೆದಾರರ ಹಣವನ್ನು ಸ್ವಯಂಘೋಷಿತ ದೇವಮಾನವರಿಗೆ ನೀಡುವುದು ಸರಿಯಲ್ಲ. ಒಂದು ವೇಳೆ ನಿಮ್ಮ ಪೇಸಿಎಂ ಯೋಜನೆ ಮೂಲಕ ಈ ಹಣ ನೀಡಿದ್ದರೆ ಅದನ್ನು ಬೊಮ್ಮಾಯಿ ಅವರು ಒಪ್ಪಿಕೊಳ್ಳಬೇಕು. ರಾಜ್ಯದ ಖಜಾನೆ ಧರ್ಮಛತ್ರವಲ್ಲ. ಹೀಗಾಗಿ ಈ ಹಣ ಹಾಗೂ ಜಾಗ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.