ಬಜೆಟ್ ಪ್ರಕ್ರಿಯೆಯಲ್ಲಿ ಜನಾಭಿಪ್ರಾಯಗಳ ಪ್ರಾಮುಖ್ಯತೆ

ಗೋಧಿ ರಫ್ತು ನಿರ್ಬಂಧ ತೆರವು, ಬೆಂಬಲ ಬೆಲೆ ಹೆಚ್ಚಳ, ಸಕಾಲದಲ್ಲಿ ಸಾಕಷ್ಟು ರಸಗೊಬ್ಬರಗಳ ಪೂರೈಕೆ ಮಾಡಬೇಕೆಂಬುದು ರೈತರ ಮನವಿಹೊಸ ಪೆನ್ಷನ್ ಸ್ಕೀಮ್ ಗೊಂದಲ ರಾಜ್ಯ ಸರ್ಕಾರಗಳಲ್ಲಿ ಇನ್ನೂ ಇತ್ಯಾರ್ಥವಾಗದೇ ಮುಂದುವರಿಯುತ್ತಿದೆ.
ಮೋದಿ ಸರ್ಕಾರದ ಈ ಅವಧಿಯ ಕೊನೆಯ ಪೂರ್ಣಾವಧಿ ಮುಂಗಡ ಪತ್ರವನ್ನು ೨೦೨೩-೨೪ಕ್ಕಾಗಿ ಹಣಕಾಸು ಮಂತ್ರಿಗಳು ಇದೇ ಫೆಬ್ರವರಿ ಒಂದರಂದು ಸಂಸತ್ತಿನಲ್ಲಿ ಮಂಡಿಸಬೇಕು. ಅದಕ್ಕಾಗಿ ಮೊದಲ ಎರಡು ತ್ರೈಮಾಸಿಕ ವರದಿಗಳಿಂದ ಅಂಕಿ-ಸಂಖ್ಯೆಗಳು ಲಭ್ಯವಾಗಿರುತ್ತವೆ. ಡಿಸೆಂಬರ್ ಕೊನೆಯವರೆಗೆ ದೊರೆಯುವ ಮಾಹಿತಿಗಳ ಆಧಾರದಲ್ಲಿ ಹಾಲಿ ವರ್ಷದ ಅಂದಾಜುಗಳನ್ನು ತಯಾರಿಸುವ ಕಾರ್ಯ ಹಣಕಾಸು ಇಲಾಖೆಯಲ್ಲಿ ನಡೆಯುತ್ತಿರುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರು ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ತಯಾರಿಸುತ್ತಾರೆ. ಅದನ್ನು ಅರ್ಥ ಮಂತ್ರಿಗಳು ಬಜೆಟ್ ಮಂಡನೆಯ ಹಿಂದಿನ ದಿನ ಸಂಸತ್ತಿನಲ್ಲಿ ಮಂಡಿಸುತ್ತಾರೆ. ಇವುಗಳನ್ನೆಲ್ಲ ಬಳಸಿಕೊಂಡು ಅರ್ಥ ವ್ಯವಸ್ಥೆಯ ವಾರ್ಷಿಕ ಅವಶ್ಯಕತೆಗಳಿಗನುಸಾರವಾಗಿ ಬಜೆಟ್ ಅಂದಾಜುಗಳನ್ನು ತಯಾರಿಸಲಾಗಿರುತ್ತದೆ. ಇದು ಮಹತ್ವದ ದಾಖಲೆಯಾಗಿದ್ದು, ಇದರ ಮಂಡನೆಯನ್ನು ದೇಶ ಕುತೂಹಲದಿಂದ ಕಾಯುತ್ತಿರುತ್ತದೆ
ಬಜೆಟ್ (ಮುಂಗಡ ಪತ್ರ) ಸರ್ಕಾರದ ವಾರ್ಷಿಕ ಮತ್ತು ಖರ್ಚು ವೆಚ್ಚಗಳ ಲೆಕ್ಕ ಮಾತ್ರ ಆಗಿರದೇ ದೀರ್ಘಾವಧಿ ಆರ್ಥಿಕ ನೀತಿಯ ವಾರ್ಷಿಕ ಗುರಿ ಮತ್ತು ಸಾಧನೆಗಳ ಮುನ್ನೋಟವಾಗಿರುತ್ತದೆ. ಅದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಆಶೋತ್ತರಗಳನ್ನು ಈಡೇರಿಸುವ, ಅಭಿವೃದ್ಧಿಯ ಗತಿಯನ್ನು ನಿರ್ಧರಿಸುವ ಮತ್ತು ಸರ್ಕಾರದ ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸುವ ಒಂದು ಪ್ರಮುಖ ಆರ್ಥಿಕ ಸಾಧನವಾಗಿದೆ. ಇದೆ ಕಾರಣದಿಂದ ಬಜೆಟ್ ಮಂಡನೆಯ ದಿನಾಂಕಕ್ಕಿಂತ ಮೊದಲು ತಿಂಗಳುಗಟ್ಟಲೆ ವಿವಿಧ ವಲಯಗಳಲ್ಲಿ ಚರ್ಚೆಗಳು ನಡೆಯುತ್ತವೆ.
ಮಾಧ್ಯಮಗಳಲ್ಲಿ ವರದಿಗಳು ಮತ್ತು ವಿಶ್ಲೇಷಣೆಗಳು ಪ್ರಕಟವಾಗುತ್ತವೆ. ಹಿಂದಿನ ಬಜೆಟ್ ಜಾರಿಯಲ್ಲಿ ನಡೆದಿರುವ ತಪ್ಪು ಒಪ್ಪುಗಳ ಬಗ್ಗೆ ವಿವರವಾದ ಅಭಿಪ್ರಾಯಗಳನ್ನು ಪ್ರಕಟಿಸಲಾಗುತ್ತದೆ. ಆರ್ಥಿಕ ತಜ್ಞರಿಂದ ಬೇರೆ ಬೇರೆ ವಲಯಗಳಿಂದ ತಜ್ಞರ ಲೇಖನಗಳು ಪ್ರಕಟವಾಗುತ್ತವೆ. ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಅಂಶಗಳ ಬಗ್ಗೆ ಸಲಹೆಗಳೂ ಪ್ರಕಟವಾಗುತ್ತವೆ. ಇನ್ನೂ ಕೆಲವರು ಹಣಕಾಸು ಇಲಾಖೆಗೆ ನೇರವಾಗಿ ಪತ್ರ ಬರೆದು ಉಪಯುಕ್ತವೆನಿಸುವ ಸಲಹೆಗಳನ್ನು ಕೊಟ್ಟಿರುತ್ತಾರೆ. ಮತ್ತೆ ಕೆಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿರುತ್ತಾರೆ. ಇವೆಲ್ಲವನ್ನೂ ಗಮನಿಸಿ ಟಿಪ್ಪಣಿ ಮಾಡಿಕೊಳ್ಳಲು ಅರ್ಥ ಖಾತೆಯಲ್ಲಿ ಒಂದು ವಿಭಾಗವೇ ಇರುತ್ತದೆ. ಈ ಟಿಪ್ಪಣಿಗಳು ಬಜೆಟ್ ತಯಾರಿಸುವಾಗ ಉಪಯುಕ್ತ ಆಧಾರಗಳಾಗಿರುತ್ತವೆ.